ಸವದತ್ತಿ: ನವ ದುರ್ಗೆಯ ಅವತಾರಿಣಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮ ಮನೆ ಮಾಡಿದೆ. ಮೊದಲ ದಿನವಾದ ಸೋಮವಾರದಿಂದಲೇ ಭಕ್ತರು ಸಾಗರೋಪಾದಿಯಲ್ಲಿ ಹರಿದುಬಂದರು. ಘಟಸ್ಥಾಪನೆಯ ಮೂಲಕ ನವವೈಭವಕ್ಕೆ ವಿಧ್ಯುಕ್ತ ಚಾಲನೆಯೂ ದೊರೆಯಿತು.
ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಿದ್ದಾರೆ. ಅವಮಾಸ್ಯೆ ನಂತರದ ಮೊದಲ ದಿನ ಸೋಮವಾರ ಸಂಜೆ 4.30 ರಿಂದ 6.30 ಒಳಗಾಗಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮೂಲಕ ಘಟಸ್ಥಾಪನೆ ಜರುಗಿತು.
ದಸರಾ ನಿಮಿತ್ತ 9 ದಿನಗಳ ಕಾಲ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಗ್ರಂಥಾ, ಕುಷ್ಮಂದಾ, ಸ್ಕಂಧಮಾತಾ, ಕಾತ್ಯಾಯಿಣಿ, ಕಾಲರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿ ಈ ರೀತಿ 9 ಶಕ್ತಿ ದೇವತೆಗಳ ಅಲಂಕಾರದಲ್ಲಿ ರೂಪ ತಾಳಲಿದ್ದಾಳೆ ಅಮ್ಮ. ಮೊದಲ ದಿನದ ಘಟ ಸ್ಥಾಪನೆ ಮತ್ತು 5ನೇ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆಯುತ್ತಾರೆ.
ಮಂಗಳವಾರ ಮತ್ತು ಶುಕ್ರವಾರ ವಾಡಿಕೆಗಿಂತ ಹೆಚ್ಚು ಜನ ಸೇರಿ ಭಕ್ತಿ ಪರಾಕಾಷ್ಟೆ ಮೆರೆಯುತ್ತಾರೆ. ಪುರಾಣದಲ್ಲಿ ಶಕ್ತಿ ದೇವತೆಯೆಂದು ಕರೆಸಿಕೊಳ್ಳುವ ಯಲ್ಲಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ದಿನದಂದು ಆಯುಧಗಳೊಂದಿಗೆ ದೇವಿಯನ್ನು ವಿಶೇಷ ಅಲಂಕಾರದಲ್ಲಿರಿಸಿ ವಿಜೃಂಭಣೆಯಿಂದ ಪೂಜಿಸಲಾಗುತ್ತದೆ. 10ನೇ ದಿನ ಉಗರಗೋಳ ಗ್ರಾಮದ ಹದ್ದಿಗೆ ಇರುವ ಬನ್ನಿ ಮರಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬನ್ನಿ ಮುಡಿಯುವ ಧಾರ್ಮಿಕ ಕಾರ್ಯಗಳು ಜರಗುತ್ತವೆ. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಈ ಎಲ್ಲ ಧಾರ್ಮಿಕ ಆಚರಣೆಗಳು ಭಕ್ತರಿಲ್ಲದೇ ಜರುಗಿವೆ. ಇದೀಗ ನಿರ್ಬಂಧಗಳ ಸಡಿಲಿಕೆಯಿಂದ ಸಂಭ್ರಮದ ವೈಭವಕ್ಕೆ ದೇವಸ್ಥಾನ ಸಾಕ್ಷಿಯಾಗಲಿದೆ.
ಏಳುಕೊಳ್ಳಗಳ ನಾಡಿನಲ್ಲಿ ನೆಲೆ ನಿಂತು ಭಕ್ತರನ್ನು ಹಾರೈಸುತ್ತಿದ್ದಾರೆ.