ಬೆಳಗಾವಿ: ಇಲ್ಲಿನ ಅನಂತಶಯನ ಗಲ್ಲಿಯಲ್ಲಿ ಸೋಮವಾರ ರಾತ್ರಿ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಚೂರಿ ಇರಿತದಿಂದ ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕ್ಯಾಂಪ್ ಪ್ರದೇಶದ ನಿವಾಸಿ ಫರಾನ್ ಧಾರವಾಡಕರ (15) ಚೂರಿ ಇರಿತಕ್ಕೆ ಒಳಗಾದವ.
ಈತ ಇಸ್ಲಾಮಿಯಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ಗಾಯಗೊಂಡ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫರಾನ್ ಹಾಗೂ ಇಬ್ಬರು ಸ್ನೇಹಿತರು ಬೈಕ್ ಮೇಲೆ ಹೊರಟಿದ್ದರು. ನಗರದ ಅಂಬಾ ಭವಾನಿ ಮಂದಿರದ ಹತ್ತಿರ 10 ಯುವಕರ ಗುಂಪೊಂದು ಇವರ ಮೇಲೆ ಆಕ್ರಮಣ ಮಾಡಿತು. ಫರಾನ್ಗೆ ಚೂರಿಯಿಂದ ಇರಿಯಲಾಯಿತು. ಇದನ್ನು ಕಂಡು ಇಬ್ಬರು ಸ್ನೇಹಿತರು ತಪ್ಪಿಸಿಕೊಂಡು ಓಡಿದರು. ಘಟನೆಗೆ ಕಾರಣ ಹಾಗೂ ಆರೋಪಿಗಳ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.