ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ನಮ್ಮ ರಾಜ್ಯದಲ್ಲಿ ಆಗಿದ್ದು ಖೇದಕರ ಎಂದು ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಗೃಹ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ರೇವಣ್ಣ ವಿಡಿಯೋ ಹರಿದಾಡುತ್ತಿವೆ.
ಈ ಎಲ್ಲ ವಿಚಾರಗಳನ್ನು ಹಾಸನ ಬಿಜೆಪಿ ಮುಖಂಡ ದೇವರಾಜಗೌಡ ಡಿಸೆಂಬರ್ ಸಮಯದಲ್ಲೇ ವಿಜಯೇಂದ್ರ ಗಮನಕ್ಕೆ ತಂದಿದ್ದರು. ಮಾಜಿ ಶಾಸಕ ಪ್ರೀತಂಗೌಡ ಕೂಡ ಈ ಎಲ್ಲ ವಿಚಾರಗಳನ್ನು ಅಮಿತ್ ಶಾ ಗಮನಕ್ಕೆ ತಂದಿದ್ದರು. ಈ ಎಲ್ಲ ವಿಚಾರಗಳು ಗೊತ್ತಿದ್ದರೂ ರಾಜಕೀಯ ಲಾಭಕ್ಕಾಗಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರು ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಹಾಸನದ ಹಾಲಿ ಸಂಸದರಾಗಿದ್ದಾರೆ. ಅವರ ಅಧಿಕಾರ ದುರುಪಯೋಗವಾಗಿದೆ. ಅಧಿಕಾರ ದರ್ಪ, ಆಸೆ ಆಮೀಷ ತೋರಿಸಿ ನೂರಾರು ಮಹಿಳೆಯರ ದುರುಪಯೋಗವಾಗಿದೆ. ವಿಡಿಯೋ ನೋಡಿದರೆ ಮಹಿಳೆಯರ ಜೀವಂತ ಕೊಲೆಯಾಗಿದೆ ಅನಿಸುತ್ತದೆ. ವಿಡಿಯೋ ಶೇರ್ ಮಾಡಲು ಹೋಗಬೇಡಿ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದು ಹೆಬ್ಬಾಳ್ಕರ್ ಹೇಳಿದರು.