ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ.!
ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್ ಸಮಿತಿ ಮದುವೆ ಆಮಂತ್ರಣ ಮಾದರಿಯಲ್ಲಿ ಮತದಾರರಿಗೆ ಮತದಾನಕ್ಕೆ ಆಹ್ವಾನಿಸುವ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸುವ ವಿಶೇಷ ಚಟುವಟಿಕೆಯಲ್ಲಿ ತೊಡಗಿದೆ.
ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಬಬಲೇಶ್ವರ ತಾಲೂಕಿನಲ್ಲಿ ಮತದಾರರನ್ನು ಮತದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಇಂಥ ವಿಶಿಷ್ಟ ಪ್ರಯೋಗಕ್ಕೆ ಮಂದಾಗಿದೆ.
ಬಬಲೇಶ್ವರ ತಾಲೂಕ ಸ್ವಿಪ್ ಸಮಿತಿ, ನಿಡೋಣಿ ಗ್ರಾ.ಪಂ. ಸಹಯೋಗದಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮಾದರಿಯಲ್ಲಿ ಮತದಾನ ಆಹ್ವಾನ ಪತ್ರಿಕೆ ಮುದ್ರಿಸಲಾಗಿದೆ. ಈ ಆಮಂತ್ರ ಪತ್ರಿಕೆಯನ್ನು ಮತದಾರರ ಮನೆ ಮನೆಗೆ ತೆರಳಿ ವಿತರಿಸುವ ಮೂಲಕ ಮತದಾನ ಜಾಗೃತಿಗೆ ಮುಂದಾಗಿದ್ದಾರೆ.
ತಾಲೂಕ ಪಂಚಾಯತ್ ಸಹಾಯಕ ನಿರ್ದೆಶಕಿ ಭಾರತಿ ಹಿರೆಮಠ ಮತದಾರರ ಮನೆ ಮನೆಗೆ ತೆರಳಿ ಮದುವೆ ಆಮಂತ್ರಣ ಮಾದರಿಯ ಮತದಾನ ಆಮಂತ್ರಣ ಪತ್ರಿಕೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆಗೆ ಆಗಮಿಸಿ ಕಡ್ಡಾಯ ಮತದಾನ ಮಾಡಿ ಎಂದು ಮನವಿ ಮಾಡಿದರು.
ಮತದಾನದ ಮಮತೆಯ ಕರೆಯೋಲೆ, ತಾಲೂಕ ಸ್ವಿಪ್ ಸಮಿತಿ ಬಬಲೇಶ್ವರ ಇವರ ಮತದಾನ ಆಮಂತ್ರಣ ಸ್ವಸ್ತಶ್ರೀ ಶಾಲಿವಾಹನ ಶಕೆ 1945ಕ್ಕೆ ಸರಿಯಾದ ಶ್ರೀ ಶೋಭಾಕೃತ ನಾಮ ಸಂವತ್ಸರ ಚೈತ್ರಮಾಸ ಅಮೃತ ಸಿದ್ದಿಯೋಗ ದಿ.7-7-2024 ರಂದು ಮಂಗಳವಾರ ಬೆಳಗ್ಗೆ 7.00 ಘಂಟೆಯಿಂದ ಸಂಜೆ 6 ಘಂಟೆಯವರೆಗೆ ತಮ್ಮ ತಮ್ಮ ಮತಗಟ್ಟೆಗಳಲ್ಲಿ ಸಲ್ಲುವ ಶುಭಗಳಿಗೆಯಲ್ಲಿ ಮತದಾನ ನಡೆಯಲಿದೆ.
ಚುನಾವಣೋತ್ಸವ ನೆರೆವೇರುವಂತೆ ಕೇಂದ್ರ ಚುನಾವಣಾ ಆಯೋಗವು ನಿಚ್ಚಿಸಿರುವುದರಿಂದ ಸಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಸ್ವಇಚ್ಚೆಯಂತೆ ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಭಾರತದ ಭವಿಷ್ಯವನ್ನು ರೂಪಿಸಬೇಕೆಂದು ಕೋರಲಾಗಿದೆ.
ತಮ್ಮ ಆಗಮನಾಭಿಲಾಷಿಗಳು ತಾಲೂಕ ಸ್ವಿಪ್ ಸಮಿತಿ, ಗ್ರಾಮ ಪಂಚಾಯತ್ ನಿಡೋಣಿ ಎಂದು ನಮೂದಿಸಲಾಗಿದೆ.
ಈ ವಿಶಿಷ್ಟ ಮತದಾನ ಆಮಂತ್ರಣ ಪತ್ರಿಕೆ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ನಿಡೋಣಿ ಗ್ರಾ.ಪಂ. ಪಿಡಿಒ ಬುರಾನಲ್ಲಾ ಮುಜಾವರ್, ಕಾರ್ಯದರ್ಶಿ ಕಲ್ಲಪ್ಪ ಗೆಣ್ಣೂರ, ಐಇಸಿ ಸಂಯೊಂಜಕ ಶಾಂತಪ್ಪ ಇಂಡಿ, ಅಬ್ಬಾಸಾಬ್ ಮುಲ್ಲಾ, ರೂಪಾ ಚಿಮ್ಮಡ, ಅಶ್ವೀನಿ ಶಹಾಪೂರ, ಅಬ್ಧುಲ್ ಮುಜಾವರ್ ಇತರರು ಮತದಾರರ ಮನೆ ಮನೆಗಳಿಗೆ ತರೆಳಿ ಮತದಾನ ಆಮಂತ್ರಣ ಪತ್ರಿಕೆ ವಿತರಿಸಿ, ಮತದಾನಕ್ಕೆ ಮನವಿ ಮಾಡುತ್ತಿದ್ದಾರೆ.