ಕಲಬುರಗಿ: ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಯ ಪರ ಮತಯಾಚಿಸಿದ್ದ ಮೋದಿ ಹಾಗೂ ಅಮಿತ್ ಶಾ ಈಗಲಾದರೂ ಉತ್ತರಿಸಿಲಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಆಗ್ರಹಿಸಿದರು.
ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಕಾಂಗ್ರೆಸ್ ಪರ ಮತಯಾಚಿಸಿ ಮಾತನಾಡಿದ ಅವರು, ಮಹಿಳೆಯರ ಅತ್ಯಾಚಾರ ಎಸಗಿದ ಅದೇ ವ್ಯಕ್ತಿ ಯಾರಿಗೂ ಗೊತ್ತಾಗದಂತೆ ವಿದೇಶಕ್ಕೆ ಪರಾರಿಯಾಗಿದ್ದು. ಅದಲ್ಲದೇ ಮಂಗಳ ಸೂತ್ರದ ಬಗ್ಗೆ ಮಾತನಾಡುವ ಮೋದಿ ಈಗ ಏನು ಹೇಳುತ್ತಾರೆ? ಈ ದೇಶದಲ್ಲಿ ಬಹಳಷ್ಟು ಪ್ರಧಾನಿಗಳು ಆಗಿ ಹೋಗಿದ್ದಾರೆ. ಅವರೆಲ್ಲ ಸತ್ಯದ ಹಾದಿಯಲ್ಲಿ ನಡೆದಿದ್ದಾರೆ. ಆದರೆ ಮೋದಿ ಅವರು ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು.
ಡಿಆರ್ ಡಿಓ, ಇಸ್ರೋ, ಐಐಟಿ ಸೇರಿದಂತೆ ಪ್ರಮುಖ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿದೆ. ಇಂತಹ ಯಾವುದಾದರೊಂದು ಯೋಜನೆಯನ್ನು ಮೋದಿ ಜಾರಿಗೆ ತಂದಿದ್ದರೆ ಹೇಳಲಿ. ಬಡವರು ಬಡವರಾಗಿ ಉಳಿಯುತ್ತಿದ್ದಾರೆ ಶ್ರೀಮಂತರು ಶ್ರೀಮಂತರಾಗಿದ್ದಾರೆ. ಇವುಗಳ ಬಗ್ಗೆ ನೀವು ಪ್ರಶ್ನೆ ಮಾಡಿ, ನೀವು ಸುಮ್ಮನಿದ್ದರೆ ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ಮೋದಿ ಮತ ಕೇಳಲು ಬರುತ್ತಾರೆ ಎಂದು ಎಚ್ಚರಿಸಿದರು.ಪ್ರಸ್ತುತವಾಗಿ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಸಂವಿಧಾನ ದುರ್ಬಲಗೊಳಿಸುವ ಮಾತು ನಡೆಯುತ್ತಿದೆ. ವಿಚಾರ ಮಾಡಿ ಮತದಾನ ಮಾಡಿ.
ನಿಮಗೆ ಟಿವಿಯಲ್ಲಿ ಏನು ತೋರಿಸಲಾಗುತ್ತಿದೆ ಅದು ಸತ್ಯವಲ್ಲ. ಜನರು ಹೇಗೆ ಕಷ್ಟಪಡುತ್ತಿದ್ದಾರೆ ಎನ್ನುವ ಕುರಿತು ಮೋದಿಗೆ ಗೊತ್ತಿಲ್ಲ. ಈ ಸರ್ಕಾರವನ್ನು ತೊಲಗಿಸಿ ನಿಮಗೆ ಅನುಕೂಲವಾಗುವಂತ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ. ಕಳೆದ ಐವತ್ತು ವರ್ಷದಿಂದ ನಿಮ್ಮ ಸೇವೆ ಮಾಡುತ್ತಿರುವ ಖರ್ಗೆ ಅವರಿಗೆ ಆಶೀರ್ವಾದ ಮಾಡಿ ಎಂದು ಜನತೆಯಲ್ಲಿ ಪ್ರಿಯಾಂಕ ವಾದ್ರಾ ಮನವಿ ಮಾಡಿದರು.