ಬೆಂಗಳೂರು : ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಹೆಸರು ಕೈಬಿಟ್ಟಿದ್ದರು ಎನ್ನಲಾದ ವಿಚಾರ ಮತ್ತು ಬಿಡಿಎ ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತಿತರರ ವಿರುದ್ಧದ ಎಫ್ಐಆರ್ ಕುರಿತಂತೆ ವಿಜಯೇಂದ್ರ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ತುಳಿಯುವ ಯತ್ನ ನಡೆದಿದೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿದೆ.
ಸಿಎಂ ಹುದ್ದೆಯೂ ಕೊಡಲಿಲ್ಲ, ಸಚಿವ ಸ್ಥಾನವೂ ಸಿಗಲಿಲ್ಲ. ಈಗ ರಾಷ್ಟ್ರಪತಿ ಕಾರ್ಯಕ್ರಮದಲ್ಲೂ ಹೆಸರಿಲ್ಲ. ಬಿಎಸ್ವೈ ನಂತರ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬಿಜೆಪಿ ಮುಗಿಸಿ ಹಾಕುತ್ತಿದೆ. ಉದ್ದೇಶಪೂರ್ವಕವಾಗಿ ಜಗದೀಶ್ ಶೆಟ್ಟರ್ ಹೆಸರು ಕೈಬಿಡುವ ಮೂಲಕ ಬಿಜೆಪಿ ಲಿಂಗಾಯತ ವಿರೋಧಿ ಧೋರಣೆ ಅನಾವರಣಗೊಳಿಸಿದೆ ಅಲ್ಲವೇ ಸುಧಾಕರ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಶೆಟ್ಟರ್ ಅವರ ಕ್ಷೇತ್ರದಲ್ಲೇ ರಾಷ್ಟ್ರಪತಿ ಕಾರ್ಯಕ್ರಮ. ಅವರೇ ಅಲ್ಲಿನ ಶಾಸಕರು. ಬಿಎಸ್ವೈ ನಂತರ ಬಿಜೆಪಿಯ ದೊಡ್ಡ ಲಿಂಗಾಯತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳು ಕೂಡ. ಹೀಗಿದ್ದೂ ಜಗದೀಶ್ ಶೆಟ್ಟರ್ ಹೆಸರು ಕೈಬಿಡಲಾಗಿದೆ. ಬಿಜೆಪಿಯಲ್ಲಿ ಲಿಂಗಾಯತ ವಿರೋಧಿ ಧೋರಣೆ ಅದೆಷ್ಟು ಆಳ, ಅಗಲಕ್ಕೆ ಬೇರು ಬಿಟ್ಟಿದೆ ಎಂದು ಊಹಿಸಬಹುದು ಎಂದಿರುವ ಕಾಂಗ್ರೆಸ್, #BJPvsBJP ಎಂದು ಹ್ಯಾಷ್ಟ್ಯಾಗ್ ಹಾಕಿದೆ.
ಮೊದಲು ಬಿಎಸ್ವೈ, ಈಗ ಜಗದೀಶ್ ಶೆಟ್ಟರ್. ಬಿಜೆಪಿಯ ‘ಸಂತೋಷ ಕೂಟ’ ಹಂತ ಹಂತವಾಗಿ ಬಿಜೆಪಿಯಲ್ಲಿನ ಲಿಂಗಾಯತ ನಾಯಕರನ್ನು ಮುಗಿಸುತ್ತಿದೆ ಎಂದು ಟ್ವೀಟ್ ಹಾಕಲಾಗಿದೆ. ಬಿಜೆಪಿ ಪಕ್ಷದಲ್ಲಿ ‘ಟಾರ್ಗೆಟ್ ಲಿಂಗಾಯತ’ ಎಂಬ ಆಪರೇಷನ್ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ತನ್ನ ಸ್ವಂತ ಕ್ಷೇತ್ರದ ಕಾರ್ಯಕ್ರಮದಲ್ಲೇ ಜಾಗ ಸಿಗದೆ ಅನಾಥರಾದ ಶೆಟ್ಟರ್ ಅವರ ಸ್ಥಿತಿ ಯಾರಿಗೂ ಬರಬಾರದು! ಎಂದು ವ್ಯಂಗ್ಯ ಮಾಡಲಾಗಿದೆ