ಸವದತ್ತಿ: ಈ ಹಿಂದೆ ನೀರಿನ ಕೊರತೆಯಿಂದ ಕೃಷಿ ಕಾಯಕದಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ತಾಲ್ಲೂಕಿನ ಗೊಂತಮಾರದ ರೈತ ಬಸವರಾಜ ನೇಕಾರ, ಈಗ ಕೃಷಿ ಹೊಂಡದ ನೆರವಿನಿಂದ ಸಮೃದ್ಧವಾಗಿ ಕೃಷಿ ಮಾಡುತ್ತಿದ್ದಾರೆ. ಹೊಂಡದಲ್ಲಿ ಸಂಗ್ರಹವಾದ ಮಳೆ ನೀರನ್ನು ಬೇಡಿಕೆಯನುಸಾರ ವಿವಿಧ ಬೆಳೆಗಳಿಗೆ ಉಣಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.
13 ಎಕರೆ ಜಮೀನು ಹೊಂದಿರುವ ಬಸವರಾಜ ಓದಿದ್ದು 9ನೇ ತರಗತಿಯಷ್ಟೇ. ಆದರೆ, ಕೃಷಿಯಲ್ಲಿ ಏನನ್ನಾದರೂ ಸಾಧಿಸುವ ತವಕ ಅವರಲ್ಲಿತ್ತು. ಮಳೆಗಾಲದಲ್ಲೇನೂ ಹೆಚ್ಚಿನ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಬೇಸಿಗೆಯಲ್ಲೇ ಕೃಷಿಗೆ ನೀರಿನ ಕೊರತೆ ಕಾಡುತ್ತಿತ್ತು. ಆದರೆ, ‘ಕೃಷಿ ಭಾಗ್ಯ’ ಯೋಜನೆಯಡಿ ಹೊಂಡ ನಿರ್ಮಿಸಿದ ನಂತರ ಖುಷಿಯಿಂದ ಒಕ್ಕಲುತನ ಮಾಡುತ್ತಿದ್ದಾರೆ.
ಹತ್ತಿ, ಹೆಸರು, ಉದ್ದು, ಶೇಂಗಾ, ಜೋಳ, ಕಬ್ಬು, ಮೆಣಸಿನಕಾಯಿ, ಟೊಮ್ಯಾಟೊ, ಡೊಣ್ಣ ಮೆಣಸಿನಕಾಯಿ, ಬೀನ್ಸ್, ಹಿರೇಕಾಯಿ, ಬೆಳ್ಳುಳ್ಳಿ ಹೀಗೆ… ವಿವಿಧ ಬೆಳೆಗಳನ್ನು ಬೆಳೆದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಪದವೀಧರರಾದ ಪುತ್ರ ಆನಂದ ಅವರೂ, ತಂದೆಯ ಕೃಷಿ ಕಾಯಕಕ್ಕೆ ಸಾಥ್ ಕೊಡುತ್ತಿದ್ದಾರೆ.