ಚಿಕ್ಕೋಡಿ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯಲ್ಲಿ ನೀರಿನ ಪ್ರಮಾಣ ತೀವ್ರ ಕುಸಿತ ಕಂಡಿದೆ. ಇದರಿಂದ ಮನುಷ್ಯರು ಮಾತ್ರವಲ್ಲ; ಜಲಚರಗಳಿಗೂ ಆತಂಕ ಎದುರಾಗಿದೆ. ಚಿಕ್ಕೋಡಿ ಉಪವಿಭಾಗದ ಎಲ್ಲ ಪ್ರದೇಶಗಳಲ್ಲೂ ಕುಡಿಯುವ ನೀರಿಗೆ, ಬಳಕೆಗೆ, ಹೊಲ- ಗದ್ದೆಗಳಿಗೆ, ಜಾನುವಾರುಗಳಿಗೂ ಸಂಕಷ್ಟ ಎದುರಾಗಿದೆ.
ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ ತಾಲ್ಲೂಕು ವ್ಯಾಪ್ತಿಯ ನೂರಾರು ಗ್ರಾಮಗಳು ಕೃಷ್ಣಾ ನದಿಯನ್ನು ಅವಲಂಬಿಸಿವೆ. ಉಪ ವಿಭಾಗ ವ್ಯಾಪ್ತಿಯಲ್ಲಿ 10 ಸಣ್ಣ ಪುಟ್ಟ ಬ್ಯಾರೇಜ್ಗಳಿದ್ದು, ಇನ್ನು 10 ದಿನಗಳಲ್ಲಿ ಬ್ಯಾರೇಜ್ನಲ್ಲಿ ಸಂಗ್ರಹವಾಗಿರುವ ನೀರು ಖಾಲಿಯಾಗುವ ಸಾಧ್ಯತೆ ಇದೆ.
ಕಲ್ಲೋಳ- ಯಡೂರ, ಬಾ. ಸವದತ್ತಿ- ಮಾಂಜರಿ, ಉಗಾರ- ಕುಡಚಿ, ದರೂರ- ಹಲ್ಯಾಳ, ಇಂಗಳಿ- ದಿಗ್ಗೇವಾಡಿ, ಹಿಪ್ಪರಗಿ ಜಲಾಶಯ ಸೇರಿದಂತೆ 8ಕ್ಕೂ ಹೆಚ್ಚು ಬ್ಯಾರೇಜ್ಗಳಿವೆ. 6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಪ್ಪರಗಿ ಬ್ಯಾರೇಜಿನಲ್ಲಿ ಇದೀಗ 0.833 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹವಿದೆ. ಇನ್ನುಳಿದ ಬ್ಯಾರೇಜ್ಗಳು ಅತೀ ಕಡಿಮೆ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.