ಸಂಕೇಶ್ವರ: ಮಾಜಿ ಸಚಿವ ದಿ| ಉಮೇಶ ಕತ್ತಿ ಅವರ ಕನಸಿನಂತೆ ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಲು ಈ ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಬೇಕಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಬೇಕೆಂಬ ಉಮೇಶ ಕತ್ತಿ ಕನಸನ್ನು ಮುಖ್ಯಮಂತ್ರಿಯಾಗಿ ನಾನು ಈಡೇರಿಸುತ್ತೇನೆ ಎಂದರು.
ಕಾಂಗ್ರೆಸ್ ಕೇವಲ ಮತಬ್ಯಾಂಕ್ ಸಲುವಾಗಿ ಮುಸ್ಲಿಂ ಸಮುದಾಯವನ್ನು ಇನ್ನಿತರ ಸಮುದಾಯಗಳ ಮೇಲೆ ಎತ್ತಿ ಕಟ್ಟುವ ಕೆಲಸ
ಮಾಡುತ್ತಿದೆ. ದೇಶದಲ್ಲಿ 51 ಪಕ್ಷಗಳು ಹಿಂದೂ ವಿರೋ ಧಿ ಕೆಲಸ ಮಾಡುತ್ತ ಬಂದಿದ್ದು, ಇತ್ತೀಚೆಗೆ ಶಿವಸೇನೆ ಸೇರಿ 52 ಪಕ್ಷಗಳಾಗಿವೆ. ದೇಶದಲ್ಲಿ ಹಿಂದುತ್ವದ ರಕ್ಷಣೆಗಿರುವ ಏಕೈಕ ಪಕ್ಷ ಬಿಜೆಪಿ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗೊತ್ತಿ ದೇಶದ ರಕ್ಷಣೆ ಹಾಗೂ ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಮತಚಲಾಯಿಸಿ, ಬಿಜೆಪಿ ಅಧಿಕಾರಕ್ಕೆ ತರಬೇಕೆಂದರು.
ಸಂಸದ, ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ನಿಖೀಲ್ ಕತ್ತಿ, ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಗುರುರಾಜ ಕುಲಕರ್ಣಿ, ರಾಚಯ್ಯ ಹಿರೇಮಠ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಡಾ| ರಾಜೇಶ ನೇರ್ಲಿ, ಸತ್ಯಪ್ಪಾ ನಾಯಿಕ, ಜಿ.ಎನ್. ಕ್ವಳ್ಳಿ, ಸಂಜಯ ಶಿರಕೋಳಿ, ಶಿವಾನಂದ ಮುಡಸಿ, ದುಂಡಪ್ಪಾ ಬೆಂಡವಾಡೆ, ಮಹೇಶ ದೇಸಾಯಿ, ಪವನ ಪಾಟೀಲ ಇನ್ನಿತರರಿದ್ದರು.
ಚಿಕ್ಕಪ್ಪ ರಮೇಶ ಕತ್ತಿ ಅವರಿಗೆ ಟಿಕೆಟ್ ಸಿಗದೇ ಇರುವುದಕ್ಕೆ ನೋವಾಗಿರುವುದು ನಿಜ. ಅದನ್ನು ಪಕ್ಷ ಮುಂದಿನ ದಿನಗಳಲ್ಲಿ ಸರಿಪಡಿಸಲಿದೆ ಎಂಬ ಆಶಾವಾದವಿದೆ. ದೇಶದ ಅಭಿವೃದ್ಧಿಗೆ ಎಲ್ಲ ಮುನಿಸು ಮರೆತು ಮೋದಿ ಕೈ ಬಲಪಡಿಸಲು ಸಜ್ಜಾಗಿದ್ದೇವೆ.
ನಿಖಿಲ್ ಕತ್ತಿ, ಶಾಸಕ