ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಶುರುವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ಹಂತದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಭಾರತ ಯಶಸ್ಸು ಕಂಡಿತ್ತು ಎಂದು ಹೇಳಲಾಗಿತ್ತು. ಇದೀಗ, ಮತ್ತೆ ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿವೆ. ಸದ್ಯ ಮಹಾರಾಷ್ಟ್ರದಲ್ಲಿ ಹೆಚ್ಚು ಕೇಸ್ಗಳು ಪತ್ತೆಯಾಗುತ್ತಿದೆ.
ಈ ಹಿನ್ನೆಲೆ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡುವ ಸುಳಿವು ಸಿಕ್ಕಿದೆ. ಇದರ ಮೊದಲ ಹಂತ ಎಂಬಂತೆ ಚಿತ್ರಮಂದಿರಗಳು, ರಂಗಮಂದಿರಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಶೂಟಿಂಗ್ ಮಾಡಲು ಷರತ್ತು ವಿಧಿಸಲಾಗಿದೆ.
ನೂತನವಾಗಿ ಪ್ರಕಟಿಸಿರುವ ಮಾರ್ಗಸೂಚಿ ಅನ್ವಯ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮುಂದಿನ ಆದೇಶದವರೆಗೂ ಸಿನಿಮಾ ಮಂದಿರ ತೆರೆಯುವಂತಿಲ್ಲ.
ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ.
* ಹೆಚ್ಚು ಜನರನ್ನು ಒಳಗೊಂಡಂತೆ ಚಿತ್ರೀಕರಣ ಮಾಡುವಂತಿಲ್ಲ.
* ಶೂಟಿಂಗ್ನಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಗಳು ಕೊರೊನಾ ನೆಗೆಟಿವ್ ಪ್ರಮಾಣಪತ್ರ ಹೊಂದಿರಬೇಕು. ಆ ಪ್ರಮಾಣಪತ್ರ 15 ದಿನಗಳು ಕಾಲ ಚಾಲ್ತಿಯಲ್ಲಿರುತ್ತದೆ. ಏಪ್ರಿಲ್ 10 ರಿಂದ ಇದು ಅನ್ವಯವಾಗಲಿದೆ.
ಏಪ್ರಿಲ್ 4 ರಂದು ಹೊರಡಿಸಿರುವ ಹೊಸ ಮಾರ್ಗಸೂಚಿ ಏಪ್ರಿಲ್ 30ರ ವರೆಗೂ ಜಾರಿಯಲ್ಲಿರಲಿದೆ ಎಂದು ಸರ್ಕಾರ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಬಾಲಿವುಡ್ನ ಹಲವು ಕಲಾವಿದರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅಮೀರ್ ಖಾನ್, ಆಲಿಯಾ ಭಟ್, ಅಕ್ಷಯ್ ಕುಮಾರ್, ಫಾತಿಮಾ, ವಿಕ್ಕಿ ಕೌಶಲ್, ಭೂಮಿ ಪಡ್ನೆಕರ್, ಗೋವಿಂದ ಸೇರಿದಂತೆ ಇನ್ನು ಹಲವರಿಗೆ ಕೋವಿಡ್ ತಗುಲಿದೆ. ಸಿನಿಮಾ ಕಲಾವಿದರು ಮಾತ್ರವಲ್ಲ ಅನೇಕ ಕಿರುತೆರೆ ಕಲಾವಿದರಿಗೂ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.
ಸದ್ಯ, ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ವೀಕೆಂಡ್ ಲಾಕ್ಡೌನ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ತೆರೆಕಾಣಬೇಕಿದ್ದ ಹಲವು ಚಿತ್ರಗಳು ಮುಂದೂಡಿಕೆಯಾಗಿವೆ.
ಕರ್ನಾಟಕದಲ್ಲಿ ಏಪ್ರಿಲ್ 7 ರಿಂದ ಚಿತ್ರಮಂದಿರಗಳಲ್ಲಿ ಶೇಕಡಾ 50 ರಷ್ಟು ಆಸನ ಭರ್ತಿಗೆ ಆದೇಶ ಮಾಡಲಾಗಿದೆ