ಹುಬ್ಬಳ್ಳಿ: ಸಂಸದ ಪ್ರಜ್ವಲ್ ವಿರುದ್ಧ ಗಂಭೀರ ಆರೋಪ ಕೇಳಿಬಂದ ಕೂಡಲೇ ಏಕೆ ರಾಜ್ಯ ಪೊಲೀಸರು ಎಫ್ಐಆರ್ ಹಾಕಲಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ನಡುವೆ ಒಪ್ಪಂದವಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದಲ್ಲಿ ಕಾಂಗ್ರೆಸ್ ಬೇಜವಾಬ್ದಾರಿಯಿಂದ ಆರೋಪ ಮಾಡುತ್ತಿದೆ.
ರಾಜ್ಯ ಪೊಲೀಸರು ತತ್ಕ್ಷಣವೇ ಎಫ್ಐಆರ್ ಹಾಕಬೇಕಿತ್ತು. ಎಫ್ಐಆರ್ ಹಾಕುವ ಮೊದಲೇ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದಾರೆ. ಅವರು ವಿದೇಶಕ್ಕೆ ಹೋಗುವುದು ಕೇಂದ್ರಕ್ಕೆ ಕನಸು ಬೀಳುತ್ತದೆಯೇ? ರಾಜ್ಯ ಸರಕಾರ ತನ್ನ ತಪ್ಪನ್ನು ಕೇಂದ್ರದ ಮೇಲೆ ಹಾಕಲು ನೋಡುತ್ತಿದೆ. ಜೆಡಿಎಸ್ ಸ್ವತಂತ್ರ ಪಕ್ಷವಾಗಿದ್ದು, ಅವರನ್ನು ಉಚ್ಛಾಟಿಸಿದೆ.
ಆ ಪಕ್ಷ ಕೈಗೊಂಡ ಕ್ರಮಕ್ಕೆ ಬಿಜೆಪಿ ವಿರೋಧವಿಲ್ಲ. ಯಾರೇ ಆಗಲಿ ಆರೋಪ ಮಾಡುವಾಗ ಬುದ್ಧಿ-ಜ್ಞಾನ ಇರಿಸಿಕೊಳ್ಳಬೇಕು. ದುರುದ್ದೇಶದಿಂದ ಹೇಳಿಕೆಗಳು ಕೂಡಿರಬಾರದು. ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಎಂಬ ಕಾರಣಕ್ಕೆ ಪ್ರಕರಣ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕಾನೂನು ಪ್ರಕಾರ ಯಾರೇ ತಪ್ಪು ಮಾಡಿದರು ಶಿಕ್ಷೆಯಾಗುತ್ತದೆ ಎಂದರು.