ಬೆಂಗಳೂರು: ವಿಧಾನಸಭೆ ಅಧಿವೇಶನದ ವೇಳೆ ನೆನ್ನೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ವಿಧಾನಸಭೆ ವಿಸರ್ಜಿಸಿ ಬನ್ನಿ. ಜನರು ಯಾರಿಗೆ ಆಶೀರ್ವಾದ ಮಾಡುತ್ತಾರೆ ನೋಡೋಣ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದರು. ಇದೇ ವಿಚಾರವಾಗಿ ನೆನ್ನೆ ಸದನದಲ್ಲಿ ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಂದು ಈ ವಿಷಯವಾಗಿ ಬಿಜೆಪಿ ಟ್ವೀಟ್ ಮಾಡಿ, ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿತ್ತು. ಇದೇ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ಪ್ರತಿಏಟು ನೀಡಿದೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ, ಸಿದ್ದರಾಮಯ್ಯ ಅವರೇ, ಯಾವ ಮಾನದಂಡ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸೋಣ ಎಂದು ಹೇಳುತ್ತಿದ್ದೀರಿ? ಲೋಕಸಭಾ ಚುನಾವಣೆ, ಉಪಚುನಾವಣೆಗಳಲ್ಲಿ ಸೋತಿದ್ದೀರಿ, ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲೇ ಸೋತಿದ್ದೀರಿ. ಮುಂದೆ ಕಾಂಗ್ರೆಸ್ ಸೋಲುವುದನ್ನು ಅರಿತು ಡಿ.ಕೆ.ಶಿವಕುಮಾರ್ ಅವರ ಬಲ ಕುಗ್ಗಿಸುವ ಪ್ರಯತ್ನದ ಭಾಗವೇ ಇದು ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿತ್ತು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ನಿಮ್ಮ ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ವಾಮಮಾರ್ಗದ ಸರ್ಕಾರ. ನಿಮ್ಮವರೇ ಹೇಳಿದಂತೆ ಬ್ಲಾಕ್ಮೇಲ್ ಸಂಪುಟ. ಹನಿಟ್ರ್ಯಾಪ್ ಮೂಲಕ ಆಪರೇಷನ್ ಕಮಲ. ಯತ್ನಾಳ್ ಹೇಳಿದಂತೆ ಬಿಎಸ್ವೈ ಫ್ಯಾಮಿಲಿ ಸರ್ಕಾರ, ದಂಡದ ಸರ್ಕಾರಕ್ಕೆ ಮಾನ ಎಲ್ಲಿದೆ. ಬಿಜೆಪಿಗೆ ತಾಕತ್ತಿದ್ದರೆ ಆಪರೇಷನ್ ಕಮಲದ ಸರ್ಕಾರವನ್ನು ವಿರ್ಜಿಸಿ ಚುನಾವಣೆಗೆ ಬನ್ನಿ ಎಂದು ಸವಾಲು ಹಾಕಿದೆ.
ರಾಜ್ಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ನೆನ್ನೆ (ಸೋಮವಾರ) ವಿಧಾನಸಭೆಯಲ್ಲಿ ಹಾಲಿ ಹಾಗೂ ಮಾಜಿ ಸಿಎಂಗಳ ನಡುವೆ ವಾಕ್ಸಮರವೇ ನಡೆಯಿತು. ಆಪರೇಷನ್ ಕಮಲ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಡುವೆ ಬಿಸಿ ಬಿಸಿ ಚರ್ಚೆ ನಡೆಯಿತು.
ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದು, ಆಪರೇಷನ್ ಬರ್ಬಾದ್ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದಾಗ ಆಪರೇಷನ್ಗೆ ನೀವೇ ಅಲ್ವಾ ಶಾಸಕರನ್ನು ಕಳುಹಿಸಿದ್ದು ಎಂದು ಬಿಎಸ್ವೈ ಹೇಳಿದರು. ಆಗ ಸಿದ್ದರಾಮಯ್ಯ ಅವರು, ನಾನು ಕಳುಹಿಸಿದ್ದಾ..? ಸರಿ ಹಾಗಾದರೆ ಅವರನ್ನು ವಾಪಸ್ಸು ಕಳುಹಿಸಿಬಿಡಿ ಎಂದರು. ಮುಂದುವರೆದು, ಅಸೆಂಬ್ಲಿ ವಿಸರ್ಜನೆ ಮಾಡಿ ಬನ್ರಿ, ಎಲೆಕ್ಸನ್ ಗೆ ಹೋಗೋಣ. ಜನರು ಯಾರಿಗೆ ಆಶೀರ್ವಾದ ಮಾಡ್ತಾರೆ ನೋಡೋಣ. ವಿಧಾನಸಭೆ ವಿಸರ್ಜನೆ ಆದರೆ ನಾವು ಏನು ಹಿಂದೆ ಬೀಳಲ್ಲ. ನಾವು ಎಲೆಕ್ಷನ್ ಫೇಸ್ ಮಾಡೋಕೆ ಸಿದ್ದರಿದ್ದೇವೆ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಅದಕ್ಕೆ ಬಿಜೆಪಿ ಸದಸ್ಯರೆಲ್ಲರೂ ನಾವೆಲ್ಲರೂ ರೆಡಿ ಇದ್ದೇವೆ ಎಂದು ಹೇಳಿದರು.ಈ ವೇಳೆ ಇದಕ್ಕೆ ನೀವಿಬ್ಬರೂ ಒಪ್ಕೊಂಡ್ರೆ ನಾವು ರೆಡಿ ಇದ್ದೇವೆ ಎಂದು ಜೆಡಿಎಸ್ನ ರೇವಣ್ಣ ಹೇಳಿದರು. ಇದಕ್ಕೂ ಮುನ್ನ ಉಪ ಚುನಾವಣೆ ಗೆಲುವಿನ ಬಗ್ಗೆ ಸಿಎಂ ಪ್ರಸ್ತಾಪ ಮಾ