ಮುಳಬಾಗಿಲು: ರಾಜ್ಯದ ಕಟ್ಟಕಡೆಯ ಹಾಗೂ ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಮುಳಬಾಗಿಲು ತಾಲ್ಲೂಕು ಬಯಲು ಪ್ರದೇಶವಾಗಿದೆ. ಯಾವುದೇ ಶಾಶ್ವತ ನೀರಾವರಿ ಯೋಜನೆಗಳು ಇಲ್ಲದಿರುವುದರಿಂದ ಕೇವಲ ಮಳೆ ಹಾಗೂ ಕೊಳವೆ ಬಾವಿಗಳ ನೀರನ್ನೇ ಅವಲಂಬಿಸಿದೆ. ಹೀಗಾಗಿ ತಾಲ್ಲೂಕಿಗೆ ನದಿ ತಿರುವು ಅಥವಾ ಡ್ಯಾಮುಗಳನ್ನು ನಿರ್ಮಾಣ ಮಾಡುವ ಮೂಲಕ ಶಾಶ್ವತ ನೀರಾವರಿಯ ಅವಶ್ಯಕವಾಗಿದೆ.
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ಮುಳಬಾಗಿಲು ತಾಲ್ಲೂಕಿನಲ್ಲಿ ಒಟ್ಟು 369 ಗ್ರಾಮಗಳಿದ್ದು ಎಲ್ಲಿಯೂ ನೀರಾವರಿ ಸೌಕರ್ಯಗಳಾಗಲಿ ಅಥವಾ ಯಾವುದೇ ನೀರಾವರಿ ಯೋಜನೆಗಳಾಗಲಿ ಇಲ್ಲ. ಹೀಗಾಗಿ ಕೇವಲ ಕೊಳವೆ ಬಾವಿಗಳಲ್ಲೋ ಅಥವಾ ಮಳೆಯನ್ನೋ ನಂಬಿಕೊಂಡು ಜನ ಮತ್ತು ರೈತರು ಜೀವನ ಸಾಗಿಸುತ್ತಿದ್ದಾರೆ. ತಾಲ್ಲೂಕಿಗೆ ಹೊಂದಿಕೊಂಡಿರುವ, ಕೇವಲ ಎರಡೇ ಕಿ.ಮೀ ದೂರದಲ್ಲಿರುವ ಕೃಷ್ಣಾ ನದಿಯ ನೀರನ್ನು ತಾಲ್ಲೂಕಿಗೂ ಹರಿಸಿದರೆ ಅಂತರ್ಜಲ ವೃದ್ಧಿಯ ಜೊತೆಗೆ ಶಾಶ್ವತ ಕುಡಿಯುವ ನೀರು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಶಾಶ್ವತ ನೀರಿನ ಪರಿಹಾರ ಕಂಡುಕೊಳ್ಳಬಹುದು ಎಂಬುದು ಇಲ್ಲಿನ ಜನರ ದಶಕಗಳ ಬೇಡಿಕೆಯಾಗಿದೆ.
ಬಯಲು ಪ್ರದೇಶವಾಗಿರುವ ತಾಲ್ಲೂಕಿನಲ್ಲಿ ಯಾವುದೇ ನದಿ ಅಥವಾ ನಾಲೆಗಳ ಮೂಲಗಳು ಇಲ್ಲ. ಕನಿಷ್ಠ ಮಳೆ ಸೊಂಪಾಗಿ ಬರುವಂತಹ ವಾತಾವರಣವನ್ನು ಸೃಷ್ಟಿ ಮಾಡುವ ಅರಣ್ಯಗಳೂ ಸಹ ಇಲ್ಲ. ಹೀಗಾಗಿ ಈಗಾಗಲೇ ಐದು ವರ್ಷಗಳಿಂದ ಸರ್ಕಾರ ಮುಳಬಾಗಿಲನ್ನು ಬರಗಾಲದ ತಾಲ್ಲೂಕು ಎಂದು ಘೋಷಣೆ ಮಾಡಿದೆ. ಇದರಿಂದ ಉದ್ಯೋಗ ಸೃಷ್ಟಿಸುವ ಕಂಪನಿಗಳು, ಕಾರ್ಖಾನೆಗಳಾಗಲಿ ಇತ್ತ ಬಂಡವಾಳ ಹೂಡಲು ಬರುತ್ತಿಲ್ಲ. ತಾಲ್ಲೂಕು ತೀರಾ ಹಿಂದುಳಿದಿದ್ದು ಕೃಷ್ಣಾ ನದಿಯಿಂದ ಶಾಶ್ವತ ನೀರಾವರಿ ಯೋಜನೆ ಅನುಕೂಲವಾದರೆ ತಾಲ್ಲೂಕು ಅರ್ಧ ಅಭಿವೃದ್ಧಿಯಾದಂತೆ ಎಂಬುದು ತಾಲ್ಲೂಕಿನ ಜನರ ವಾದ.
ಈಗಾಗಲೇ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಬಳಿಯಿರುವ ಯರಗೋಳ್ ಡ್ಯಾಮ್ ಮೂಲಕ ಜಿಲ್ಲೆಯ ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲ್ಲೂಕಿನ ಪಟ್ಟಣಗಳು ಹಾಗೂ ಮೂರೂ ತಾಲ್ಲೂಕುಗಳ 45 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ನೀರನ್ನು ಒದಗಿಸುವ ಯೋಜನೆ ಸಿದ್ಧವಾಗಿದೆ. ಇದೇ ರೀತಿಯಲ್ಲಿ ತಾಲ್ಲೂಕಿನಲ್ಲಿ ವಿಶಾಲವಾದ ನೀರು ಸಂಗ್ರಹ ಯೋಜನೆ ಅಥವಾ ನದಿಗಳ ತಿರುವು ಯೋಜನೆಯ ಮೂಲಕ ತಾಲ್ಲೂಕಿಗೆ ನೀರನ್ನು ಹರಿಸಿದರೆ ತಾಲ್ಲೂಕಿನ ಬರಗಾಲ ನಿವಾರಣೆಯಾಗಲಿದೆ.