ಬೆಂಗಳೂರು(ಮಾ.10): ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಮಹಿಳೆಯರಿಗಾಗಿ ಈ ಬಾರಿಯ ಬಜೆಟ್ ನಲ್ಲಿ ಅತ್ಯುತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಅದಕ್ಕಾಗಿ ನಾನು ಸಿಎಂ ಯಡಿಯೂರಪ್ಪನವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ತೋಳದ ಬೋನಿನೊಳಗೆ ನಾಯಿಯನ್ನು ಇರಿಸಿದ ಚೀನಾದ ಮೃಗಾಲಯ ಸಿಬ್ಬಂದಿ: ವಿಡಿಯೋ ವೈರಲ್
ಮುಂದುವರೆದ ಅವರು, ಭೂಮಿ ತಾಯಿ, ನದಿ, ಪ್ರಕೃತಿ ಎಲ್ಲವನ್ನೂ ತಾಯಿಗೆ ಹೋಲಿಸುತ್ತೇವೆ. ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ ಎಂದು ಹೇಳಿದರು.
ಹೆಣ್ಣಿನ ಬಗ್ಗೆ ಗೌರವವನ್ನು ಹೊಂದಿರುವಂತಹ ದೇಶ ನಮ್ಮದು. ನಮ್ಮ ದೇಶಕ್ಕಾಗಿ, ನಾಡಿಗಾಗಿ, ನೆಲ-ಜಲ ರಕ್ಷಣೆಗಾಗಿ ಸ್ರ್ತೀಯರು ಹೋರಾಟ ಮಾಡಿದ ದೇಶ ನಮ್ಮದು. ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಿದ ಮಣ್ಣಿನಲ್ಲಿ ನಾನು ಹುಟ್ಟಿರುವುದು ಪುಣ್ಯ. ಆ ನೆಲದಲ್ಲಿ ನಡೆಯಬೇಕಾದ್ರೆ ಹೆಮ್ಮೆ ಅನಿಸುತ್ತೆ ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಹಾಗೂ ಜಿಡಿಪಿ ಹೆಚ್ಚಳಕ್ಕೆ ಮಹಿಳೆಯರ ಕೊಡುಗೆ ಇದೆ. ಬಜೆಟ್ನಲ್ಲಿ ಮಹಿಳೆಯರ ಸಬಲೀಕರಣ ಹಾಗೂ ಅಭ್ಯುದಯಕ್ಕೆ ಅವಕಾಶ ನೀಡಲಾಗಿದೆ. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿರುವ ಬಜೆಟ್ ಇದಾಗಿದೆ. ಎಲ್ಲ ಇಲಾಖೆಗಳಿಗಿಂತ ಹೆಚ್ಚು ಅನುದಾನವನ್ನು ಮಹಿಳೆಯರ ಸಬಲೀಕರಣಕ್ಕೆ ನೀಡಿದ್ದೇವೆ. ಮಹಿಳಾ ವಾಣಿಜ್ಯ ಉದ್ಯಮಿಗಳನ್ನ ಬೆಳೆಸಲು ಎಲಿವೇಟ್ ಯೋಜನೆ ರೂಪಿಸಲಾಗಿದೆ. ಮಹಿಳೆಯರಿಗೆ ಸಾಲ ಸೌಲಭ್ಯವನ್ನೂ ನೀಡಿದ್ದೇವೆ ಎಂದು ಹೇಳಿದರು.