ಹುಬ್ಬಳ್ಳಿ: ನೇಹಾ ಹಿರೇಮಠ್ ಹತ್ಯೆ ಪ್ರಕರಣದ (Neha Hiremath Murder Case) ತನಿಖೆ ಚುರುಕುಗೊಂಡಿದೆ. ಈಗಾಗಲೇ ಸಿಐಡಿ (CID) ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಆರೋಪಿ ಫಯಾಜ್ (Fayaz) ವಿಚಾರಣೆ ನಡೆಸಿದ್ದಾರೆ. ಈ ನಡುವೆ ನೇಹಾ ಕುಟುಂಬಕ್ಕೆ ಸರ್ಕಾರದಿಂದ ಭದ್ರತೆ ನೀಡಲಾಗಿದೆ.
ನಿನ್ನೆ ಸಿಎಂ ಸಿದ್ದರಾಮಯ್ಯ (CM Siddaramaiah) ಭೇಟಿ ನೀಡಿದ್ದ ಸಂದರ್ಭದಲ್ಲಿ ತಮಗೆ, ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಹೀಗಾಗಿ ತಮಗೆ ಭದ್ರತೆ ಬೇಕು ಅಂತ ನೇಹಾ ತಂದೆ ನಿರಂಜನ್ ಹಿರೇಮಠ್ ಹೇಳಿದ್ದರು. ಇದಕ್ಕೆ ಸ್ಪಂದಿಸಿದ ಸರ್ಕಾರ, ಇದೀಗ ನೇಹಾ ಹಿರೇಮಠ್ ಕುಟುಂಬ ಹಾಗೂ ನೇಹಾ ತಂದೆ ನಿರಂಜನ್ ಹಿರೇಮಠ್ಗೆ (Niranjan Hiremath) ಭದ್ರತೆ ಒದಗಿಸಿದೆ.
ನೇಹಾ ಹಿರೇಮಠ್ ನಿವಾಸಕ್ಕೆ ಭದ್ರತೆ
ಹುಬ್ಬಳ್ಳಿಯಲ್ಲಿ ಕೊಲೆಯಾದ ಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ್ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರೂ ಆಗಿರುವ ನೇಹಾ ತಂದೆ ನಿರಂಜನ ಹಿರೇಮಠ್ಗೆ ಭದ್ರತೆ ನೀಡಲಾಗಿದೆ.
ನೇಹಾ ತಂದೆಗೆ ಅಂಗರಕ್ಷಕರ ನಿಯೋಜನೆ
ನೇಹಾ ತಂದೆ ನಿರಂಜನ್ ಹಿರೇಮಠ್ಗೆ ಅಂಗರಕ್ಷಕರನ್ನು ನಿಯೋಜನೆ ಮಾಡಲಾಗಿದೆ. ನೇಹಾ ನಿವಾಸಕ್ಕೂ ಭದ್ರತೆ ಒದಗಿಸಲಾಗಿದೆ. ನಿನ್ನೆ ಸಿಎಂ ಆಗಮಿಸಿದ್ದಾಗ ತಮಗೆ ಭದ್ರತೆ ಬೇಕು ಅಂತ ನಿರಂಜನ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಹಾಗೂ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ.
ನಿನ್ನೆ ನೇಹಾ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ
ಹುಬ್ಬಳ್ಳಿಯಲ್ಲಿರುವ (Hubballi) ನೇಹಾ ನಿವಾಸಕ್ಕೆ ನಿನ್ನೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ರು. ನೇಹಾ ತಂದೆ ನಿರಂಜನ್ ಹಿರೇಮಠ್ (Niranjan Hiremath) ಹಾಗೂ ತಾಯಿ ಗೀತಾ ಹಿರೇಮಠ್ (Geetha Hiremath) ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.
ನೇಹಾ ಕುಟುಂಬಸ್ಥರೊಂದಿಗೆ ನಾವಿದ್ದೇವೆ
ಈ ವೇಳೆ ಮಾತನಾಡಿದ ಸಿಎಂ, ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ ಅಂತ ಭರವಸೆ ನೀಡಿದ್ರು. ಎಲ್ಲ ಮಗ್ಗಲುಗಳಲ್ಲಿಯೂ ತನಿಖೆ ಮಾಡಲು ಸೂಚಿಸಿದ್ದೇನೆ. ಇದೊಂದು ದುರದೃಷ್ಟ ಘಟನೆ, ಸಿಐಡಿಗೆ ಕೊಟ್ಟಿದ್ದೇವೆ. ಈಗಾಗಲೇ ಆರೋಪಿಯನ್ನು ಬಂಧಿಸಿದ್ದೇವೆ. ಸಿಐಡಿ ತನಿಖೆ ಆರಂಭಗೊಂಡಿದೆ ಅಂತ ಸಿದ್ದರಾಮಯ್ಯ ಹೇಳಿದ್ದರು.
ಮಗಳ ಸಾವಿಗೆ ನ್ಯಾಯ ಕೇಳಿದ ನೇಹಾ ಹಿರೇಮಠ್ ತಂದೆ
ಸಿಎಂ ಸಿದ್ದರಾಮಯ್ಯ ಮುಂದೆ ಮಗಳ ಸಾವಿಗೆ ನ್ಯಾಯ ಕೇಳಿದ್ದಾಗಿ ನಿರಂಜನ್ ಹಿರೇಮಠ್ ಹೇಳಿದ್ದಾರೆ. ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು, ವಿಶೇಷ ನ್ಯಾಯಲಯದಲ್ಲಿ 90 ರಿಂದ 120 ದಿನಗಳಲ್ಲಿ ನ್ಯಾಯ ಸಿಗಬೇಕು ಅಂತ ನಿರಂಜನ್ ಹಿರೇಮಠ್ ಮನವಿ ಮಾಡಿದ್ರು.
ಫಯಾಜ್ನನ್ನು ಗಲ್ಲಿಗೇರಿಸಬೇಕು
ಸಾವಿಗೆ ಸಾವೇ ಶಿಕ್ಷೆಯಾಗಬೇಕು, ಆರೋಪಿ ಫಯಾಜ್ನನ್ನು ಗಲ್ಲಿಗೇರಿಸಿದ ಮೇಲೆಯೆ ನಮಗೆ ಸಮಾಧಾನ ಅಂತ ನಿರಂಜನ್ ಹಿರೇಮಠ್ ಹೇಳಿದ್ದಾರೆ. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ ಅಂತ ಅವರು ಹೇಳಿದ್ರು.
ಸಿಎಂ ನಮ್ಮ ಜೊತೆಗಿದ್ದು ನ್ಯಾಯ ಕೊಡಿಸಬೇಕು
ಸರ್ಕಾರ ನಮ್ಮ ಬೆನ್ನಿಗೆ ಇರಬೇಕು, ಸಿಎಂ ನಮ್ಮ ಜೊತೆಗಿದ್ದು ನ್ಯಾಯ ಕೊಡಿಸಬೇಕೆಂದು ಮನವಿ ಮಾಡುತ್ತೇನೆ ಅಂತ ನಿರಂಜನ್ ಹಿರೇಮಠ್ ಹೇಳಿದ್ರು. ಸಿಐಡಿ ತನಿಖೆಗೆ ಕೊಟ್ಟಿದ್ದು ಸಂತೋಷ ತಂದಿದೆ. ಕಾಂಗ್ರೆಸ್ ಮುಖಂಡರೆಲ್ಲ ನನ್ನ ಬೆನ್ನಿಗೆ ನಿಂತಿದ್ದಾರೆ ಅಂತ ಹೇಳಿದ್ರು.
ಗಲ್ಲು ಶಿಕ್ಷೆಯೇ ಆಗಬೇಕು
ಕೋಪದಲ್ಲಿ ಯಾರಿಗಾದರೂ ನೋವು ತರುವ ಹಾಗೆ ಮಾತಾಡಿದ್ದರೆ ಕ್ಷಮೆ ಕೋರುತ್ತೇನೆ ಅಂತ ನಿರಂಜನ್ ಹಿರೇಮಠ್ ಹೇಳಿದ್ದಾರೆ. ಕೊಲೆಗೆ ಕೊಲೆನೇ ಅಂದ್ರೆ ಗಲ್ಲು ಶಿಕ್ಷೆಯಾಗಬೇಕು ಎಂದು ನಿರಂಜನ ಹಿರೇಮಠ್ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಹೇಳಿದ್ದಾರೆ.