Breaking News
Home / ಜಿಲ್ಲೆ / ಹಾಸನ / ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

Spread the love

ಹಾಸನ: ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುತ್ತವೆ. ಹಾಗಾಗಿ ಯಾರೂ ಆತ್ಮಹತ್ಯೆ ಕಡೆಗೆ ಮುಖ ಮಾಡಬಾರದು ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಹೇಳಿದರು.

ನಗರದ ಎವಿಕೆ ಕಾಲೇಜಿನಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಪೂರ್ತಿ ರೇಂಜರ್‌ ಘಟಕ, ಭಾರತ ಸೇವಾದಳ ಜಿಲ್ಲಾ ಸಮಿತಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಶಿಬಿರದಲ್ಲಿ ಮಹಿಳೆ ಮತ್ತು ಕಾನೂನಿನ ರಕ್ಷಣೆ ಎಂಬ ವಿಷಯ ಕುರಿತು ಮಾತನಾಡಿದರು.

ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾತ್ಸಾರ, ಗಂಡು ಮಗು ಜನಿಸಿದರೆ ಸಿಹಿ ಹಂಚಿ ಸಂಭ್ರಮಿಸುವ ಮನಸ್ಥಿತಿಯ ಜನ ಇಂದಿಗೂ ಸಮಾಜದಲ್ಲಿ ಇದ್ದಾರೆ. ನಿತ್ಯ ಪೊಲೀಸ್‌ ಠಾಣೆಗೆ ಕೌಟುಂಬಿಕ ಸಮಸ್ಯೆ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಬರುತ್ತವೆ. ಇತ್ತೀಚೆಗೆ ಸೈಬರ್‌ ಅಪರಾಧಗಳ ಸಂಖ್ಯೆಯೇ ಹೆಚ್ಚುತ್ತಿದೆ. ಮಹಿಳೆಯರಿಗೆ
ಸಾಕಷ್ಟು ಜಾಗೃತಿ ಮೂಡಿಸಿದರೂ ಅಪರಾಧಗಳ ಸಂಖ್ಯೆ ತಗ್ಗಿಲ್ಲ. ಶೇಕಡಾ 60 ರಷ್ಟು ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌, ಇನ್‌ಸ್ಟಾಗ್ರಾಮ್‌, ವಾಟ್ಸ್‌ ಆಪ್‌ ಬಳಸುವಾಗ ಎಚ್ಚರಿಕೆ ವಹಿಸಬೇಕು. ಶೈಕ್ಷಣಿಕ ದೃಷ್ಠಿಯಿಂದ ಮಾತ್ರವೇ ಮೊಬೈಲ್‌ ಬಳಸಿ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 80 ರಿಂದ 90 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ವರ್ಷ ಮೂರು ತಿಂಗಳಲ್ಲಿ ಅಂದಾಜು 20 ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿದೆ. ಇದನ್ನೆಲ್ಲ ಗಮನಿಸಿದರೆ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಆತಂಕ ಉಂಟಾಗುತ್ತಿದೆ ಎಂದರು.

ಶಿಕ್ಷಣ ಪಡೆದ ಹೆಣ್ಣುಮಕ್ಕಳು ತಮ್ಮ ಸುತ್ತ ನಡೆಯುವ ಬಾಲ್ಯ ವಿವಾಹಗಳನ್ನು ತಡೆಯಬೇಕು. ರಾಜ್ಯ ಸರ್ಕಾರ ಹೊಸದಾಗಿ 112 ಸಹಾಯವಾಣಿ ತೆರೆದಿದ್ದು, ಕರೆ ಮಾಡಿದರೆ ಅಗ್ನಿಶಾಮಕ, ಆರೋಗ್ಯ ಹಾಗೂ ಪೊಲೀಸ್‌ ಸೇವೆ ಸಿಗಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಸೇವಾದಳ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್‌.ಎಸ್‌. ಪೂರ್ಣಿಮಾ, ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಸೇನೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆ ಇಂದು ತನ್ನನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ವಿವಿಧ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಜ್ಯೋತಿ ಆನಂದ್‌, ಎಸ್‌.ಎಲ್‌. ಚಂದನಾ, ಕೆ.ಬಿ. ಸಹನಾ, ಎಲ್‌.ಎಸ್‌. ಶಿಲ್ಪಾ, ಯಶ್ವಿನಿ ಅವರನ್ನು ಸನ್ಮಾನಿಸಲಾಯಿತು.

ಸ್ತ್ರೀ ರೋಗ ತಜ್ಞೆ ಡಾ.ಎ. ಸಾವಿತ್ರಿ, ಹಾಸನ ಲೇಡಿಸ್‌ ಕ್ಲಬ್‌ ಸಂಸ್ಥಾಪಕ ಅಧ್ಯಕ್ಷೆ ಎಂ. ಸುಮ, ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಕಮಲ್‌ ಕುಮಾರ್‌, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕೋಶಾಧ್ಯಕ್ಷ ಜಿ.ಆರ್‌. ಶ್ರೀನಿವಾಸ್‌, ಎವಿಕೆ ಕಾಲೇಜಿನ ಪ್ರಾಂಶುಪಾಲ ಕೆ.ಜಿ. ಸುರೇಶ್‌ ಕುಮಾರ್‌, ಭಾರತ ಸೇವಾದಳ ವಲಯ ಸಂಘಟಕಿ ವಿ.ಎಸ್‌. ರಾಣಿ, ಕನ್ನಡ ಪ್ರಾಧ್ಯಾಪಕ ಸಿ.ಚ. ಯತೀಶ್ವರ್‌ ಇದ್ದರು.


Spread the love

About Laxminews 24x7

Check Also

ಅಜಾನ್ ವಿರುದ್ಧ ಜೂನ್ 1ರಿಂದ ಮತ್ತೆ ಹೋರಾಟ: ಮುತಾಲಿಕ್

Spread the love ಹಾಸನ, ಮೇ 22: “ಅಜಾನ್ ವಿಷಯದಲ್ಲಿ ಸರ್ಕಾರ ದೃಢ ನಿಲುವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ