ಧಾರವಾಡ: ತಾಲ್ಲೂಕಿನ ಮಾದನಭಾವಿಯ ಎಂಜಿನಿಯರಿಂಗ್ ಪದವೀಧರ ದಯಾನಂದ ಹೊಳೆಹಡಗಲಿ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಯೋಜನ ಪಡೆದು ಥೇವಾನ್ ರೆಡ್ ಲೇಡಿ ತಳಿ ಪಪ್ಪಾಯಿ ಲಾಭ ಗಳಿಸಿದ್ದಾರೆ.
ಕೊಲ್ಲಾಪುರ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಕೋವಿಡ್ ತಲ್ಲಣದ ಕಾಲಘಟ್ಟದಲ್ಲಿ ಉದ್ಯೊಗ ತೊರೆದು ಊರು ಸೇರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
15 ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ (ಕಬ್ಬು, ಗೋವಿನಜೋಳ, ಕಡಲೆ, ತರಕಾರಿ, ಸೋಯಾಬಿನ್…) ಮಾಡುತ್ತಿದ್ದಾರೆ. ಹೊಸ ಬೆಳೆ ಪ್ರಯೋಗ ರೂಢಿಸಿಕೊಂಡಿದ್ದಾರೆ. ರಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದಾರೆ.
ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ನೀಡುವ ಸೌಲಭ್ಯಗಳ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಪಪ್ಪಾಯಿ ಬೆಳೆ ಬೆಳೆದಿದ್ದಾರೆ. 1040 ಪಪ್ಪಾಯಿ ಸಸಿಗಳನ್ನು ನರ್ಸರಿಯಿಂದ ತಂದು ಒಂದುವರೆ ಎಕರೆಯಲ್ಲಿ ನೆಟ್ಟು ಬೆಳೆಸಿದ್ದಾರೆ. ಪಪ್ಪಾಯಿ ಗಿಡಗಳ ಮಧ್ಯದಲ್ಲಿ ಮಿಶ್ರವಾಗಿ ಮೆಣಸಿನಕಾಯಿ, ಸೌತೆಕಾಯಿ, ತರಕಾರಿಗಳನ್ನು ಬೆಳೆದಿದ್ದಾರೆ.
‘ಈ ವರ್ಷ ಬರಗಾಲದಿಂದ ಕಬ್ಬು, ಸೋಯಾಬಿನ್ ಸಹಿತ ಹಲವು ಬೆಳೆಗಳು ಫಲ ನೀಡಲಿಲ್ಲ. ಪಪ್ಪಾಯಿ ಬೆಳೆ ಕೈ ಹಿಡಿಯಿತು. ಎಕರೆಗೆ 40 ಟನ್ಗಿಂತಲೂ ಹೆಚ್ಚು ಇಳುವರಿ ಬಂದಿದೆ. ಇವರೆಗೆ 25 ಟನ್ ಮಾರಾಟ ಮಾಡಿದ್ದು ₹3 ಲಕ್ಷ ಆದಾಯ ದೊರೆತಿದೆ. ಪಪ್ಪಾಯಿ ಬೆಳೆಯಲು ₹40 ಸಾವಿರ ಖರ್ಚು ಮಾಡಿದ್ದೇನೆ. ತೋಟಗಾರಿಕೆ ಇಲಾಖೆಯಿಂದ ನರೇಗಾ ಯೋಜನೆಯಡಿ ನೆರವು ಪಡೆದುಕೊಂಡಿದ್ದೇನೆ’ ಎಂದು ರೈತ ದಯಾನಂದ ಹೊಳೆಹಡಗಲಿ ‘ ತಿಳಿಸಿದರು.