ಗದಗ,ಮಾ.10(ಹಿ.ಸ): ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೆ ಮನೆ ಕಳೆದುಕೊಂಡ ಕುಟುಂಬಗಳು ಸರ್ಕಾರದ ಆಸರೆ ಮನೆಗಳ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಗದಗ ಜಿಲ್ಲೆ ರೋಣ ತಹಶಿಲ್ದಾರ ಕಚೇರಿ ಎದುರು ಬುಧವಾರ ವಿನೂತನ ಪ್ರತಿಭಟನೆ ಮಾಡಿದರು.
ರೋಣ ತಹಶಿಲ್ದಾರ್ ಕಚೇರಿ ಬಳಿ ಗಾಡಗೋಳಿ ಗ್ರಾಮದ ನೆರೆ ಸಂತ್ರಸ್ತರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ವಿನೂತನ ಹೋರಾಟ ಮಾಡಿದರು.
ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹ ಸಂದರ್ಭದಲ್ಲಿ ನೂರಾರು ಕುಟುಂಬಗಳು ಮನೆ ಕಳೆದುಕೊಂಡಿವೆ. ಗಾಡಗೋಳಿ ಗ್ರಾಮಸ್ಥರಿಗೆ ಆಸರೆ ಮನೆಗಳನ್ನು ನಿರ್ಮಿಸಿ ಗ್ರಾಮ ಸ್ಥಳಾಂತರ ಮಾಡಲಾಗಿದೆ.
ಆದ್ರೆ ಅಲ್ಲಿರುವ ನೂರಾರು ಕುಟುಂಬಗಳಿಗೆ ಇನ್ನು ಹಕ್ಕುಪತ್ರಗಳನ್ನು ನೀಡಿಲ್ಲ. ಇದರಿಂದ ರೋಷಿಹೋದ ಸಂತ್ರಸ್ತರು, ಜನಪ್ರತಿನಿಧಿಗಳು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶೀಘ್ರದಲ್ಲೆ ಸಂತ್ರಸ್ತರ ಆಸರೆ ಮನೆಗಳ ಹಕ್ಕು ಪತ್ರ ನೀಡದೆ ಹೋದ್ರೆ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.