ಬೆಂಗಳೂರು,ಡಿ.27- ರಾಜ್ಯದಲ್ಲಿ ಬ್ರಿಟನ್ ಮಾದರಿಯ ರೂಪಾಂತರಗೊಂಡ ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ಬಾರಿ ಹೊಸ ವರ್ಷಾಚರಣೆಗೆ ಸಂಪೂರ್ಣ ನಿರ್ಬಂಧ ಹಾಕಿದೆ. ಕೋವಿಡ್ ರೂಪಾಂತರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ವರ್ಷಾಚರಣೆ ಸಂಬಂಧ ಸರ್ಕಾರದ ವತಿಯಿಂದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದೇವೆ. ಸಾರ್ವಜನಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದರು.
ವಿಧಾನಸೌಧದ ಪೂರ್ವ ದ್ವಾರದ ಬಳಿ ಆದಿತ್ಯ ಮೆಹತಾ ಫೌಂಡೇಷನ್ ಮತ್ತು ಬಿಎಸ್ಎಫ್ ಸಹಯೋಗದಲ್ಲಿ ವಿಶೇಷ ಚೇತನ ಪ್ರತಿಭೆಗಳಿಗೆ ಉತ್ತೇಜಿಸಲು ಇನ್ವಿಲಿಟಿ-2020 ನಿ ಸಂಗ್ರಹಣೆ ಸೈಕಲ್ ಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ಬಾರಿಯ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕರ ಪಾರ್ಟಿಗಳಿಗೆ ಅವಕಾಶ ಕೊಡುವುದಿಲ್ಲ. ಈಗಾಗಲೇ ನಗರ ಪೆÇಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ವತಿಯಿಂದಲೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದೇವೆ. ನಾಳೆ ಮತ್ತೊಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.
ದೊಡ್ಡಸಂಖ್ಯೆಯಲ್ಲಿ ಒಂದೆಡೆ ಸೇರಿದರೆ ಕೋವಿಡ್ ಸೋಂಕು ಹಬ್ಬುವ ಸಾಧ್ಯತೆ ಇರುತ್ತದೆ. ಅದರಲ್ಲೂ ಔತಣಕೂಟಗಳಲ್ಲಿ ಜನರು ತುಂಬ ಹತ್ತಿರವೇ ಇರುತ್ತಾರೆ. ಸೋಂಕು ತಡೆಗಟ್ಟುವ ಕಾರಣಕ್ಕಾಗಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ. ಇದು ಪ್ರಸ್ತುತ ಅನಿವಾರ್ಯ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಮಾರ್ಗಸೂಚಿಗಳು ಯಾವ ರೀತಿ ಇರಬೇಕೆಂಬುದನ್ನು ಈಗಾಗಲೇ ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ಮತ್ತು ಬಿಬಿಎಂಪಿ ಅಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಈ ಬಾರಿ ಕಠಿಣ ನಿಯಮಗಳನ್ನು ಅನಿವಾರ್ಯವಾಗಿ ಜಾರಿ ಮಾಡಲೇಬೇಕಾಗುತ್ತದೆ.
ನೈಟ್ ಕಫ್ರ್ಯೂ ಇಲ್ಲ ಎಂದ ಮಾತ್ರಕ್ಕೆ ಮನಸೋ ಇಚ್ಛೆ ಪಾರ್ಟಿ,ಸಭೆ, ಸಮಾರಂಭಗಳನ್ನು ನಡೆಸುವಂತಿಲ್ಲ. ಹಾಗೊಂದು ವೇಳೆ ಕಾನೂನು ಮೀರಿ ವರ್ತಿಸಿದರೆ ಅಂಥವರ ಮೇಲೆ ಶಿಸ್ತುಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಬ್ರಿಟನ್ನಿಂದ ಆಗಮಿಸುವವರ ಪತ್ತೆ ಕಾರ್ಯ ಮುಂದುವರೆದಿದೆ. ಅವರು ಎಲ್ಲಿದ್ದಾರೆ? ಯಾವ ಮನೆಯಲ್ಲಿದ್ದಾರೆ? ಸೇರಿದಂತೆ ಎಲ್ಲವನ್ನೂ ಟ್ರೇಸ್ ಮತ್ತು ಟ್ರಾಕ್ ಮಾಡುತ್ತಿದ್ದೇವೆ. ಈಗಾಗಲೇ ಪ್ರತಿಯೊಬ್ಬರ ವಿಳಾಸವನ್ನು ಪತ್ತೆ ಹಚ್ಚುವಂತೆ ಸಂಬಂಧಪಟ್ಟ ಅಕಾರಿಗಳಿಗೆ ಸೂಚಿಸಲಾಗಿದೆ. ಯಾರೂ ಕೂಡ ತಲೆಮರೆಸಿಕೊಂಡು ಓಡಾಡಲು ಸಾಧ್ಯವಿಲ್ಲ. ಒಂದು ವೇಳೆ ಬ್ರಿಟನ್ನಿಂದ ಆಗಮಿಸಿದ್ದವರಾಗಿದ್ದರೆ ಹೋಂ ಕ್ವಾರಂಟೇನ್ಗೆ ಒಳಪಡಿ ಎಂದು ಬೊಮ್ಮಾಯಿ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಈಗ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ವಿಶೇಷವಾಗಿ ಬ್ರಿಟನ್ನಿಂದ ಬಂದವರ ಮೇಲೆ ಹೆಚ್ಚು ನಿಗಾವಹಿಸುವಂತೆ ಸೂಚಿಸಲಾಗಿದೆ. ಅಲ್ಲಿ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿರುವುದರಿಂದ ನಮ್ಮಲ್ಲೂ ಹಬ್ಬಬಹುದೆಂಬ ಕಾರಣಕ್ಕಾಗಿ ತ್ವರಿತ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗಾಗಲೇ ಆರೋಗ್ಯ ಇಲಾಖೆ ಕೆಲವು ನಿಯಮಗಳನ್ನು ಜಾರಿ ಮಾಡಿದ್ದು, ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.
ಸೇಫ್ ಸಿಟಿ ಯೋಜನೆಯ ಟೆಂಡರ್ ವಿವಾದ ಸಂಬಂಧ ಇಬ್ಬರು ಐಪಿಎಸ್ ಅಕಾರಿಗಳ ನಡುವೆ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್.ವಿಜಯಭಾಸ್ಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರಿಂದ ವಿವರ ಪಡೆದಿದ್ದೇನೆ. ಯಾರಿಗೆ ಉಪದೇಶ ಮಾಡಬೇಕು, ಯಾರಿಂದ ಕೆಲಸ ಮಾಡಿಸಬೇಕು ಎಂಬುದನ್ನು ಡಿಜಿ ಹಾಗೂ ಮುಖ್ಯ ಕಾರ್ಯದರ್ಶಿಗಳು ಏಕಕಾಲಕ್ಕೆ ಎರಡೂ ಕೆಲಸವನ್ನು ಮಾಡಲಿದ್ದಾರೆ ಎಂದು ಸೂಚ್ಯವಾಗಿ ಹೇಳಿದರು.
# ನಿರ್ಬಂಧ:
ಮೂಲಗಳ ಪ್ರಕಾರ ಈ ಬಾರಿ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲು ಮುಂದಾಗಿದೆ ಬ್ರಿಟನ್ ಮಾದರಿಯ ಸೋಂಕು ಅಲ್ಲಿಂದ ಇಲ್ಲಿಗೆ ಬಂದವರಲ್ಲಿ ಕಾಣಿಸಿಕೊಂಡರೆ ಪರಿಸ್ಥಿತಿ ಕೈಮೀರಬಹುದೆಂದು ಎಚ್ಚರಿಕೆ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ರಾತ್ರಿ 11 ಗಂಟೆಯೊಳಗೆ ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್ಗಳು, ಡಿಸ್ಕೋಥೆಕ್, ಪಂಚಾತಾರ ಹೋಟೆಲ್ಗಳು, ಡಾಬಾಗಳು ಸಭೆ ಸಮಾರಂಭ, ಔತಣಕೂಟಗಳನ್ನು ಮುಗಿಸಲೇಬೇಕು.
ಹೊಸ ವರ್ಷಾಚರಣೆಗಾಗಿಯೇ ಯಾರೊಬ್ಬರೂ ವಿಶೇಷವಾಗಿ ಹೋಟೆಲ್, ರೆಸ್ಟೋರೆಂಟ್, ಕ್ಲಬ್ಗಳು ಸೇರಿದಂತೆ ಯಾವುದನ್ನೂ ಅಲಂಕಾರ ಮಾಡಬಾರದು. ಯಾವುದೇ ಚಟುವಟಿಕೆಗಳಿದ್ದರೂ 11 ಗಂಟೆಯೊಳಗೆ ಮುಗಿಸಲೇಬೇಕೆಂದು ಮಾರ್ಗಸೂಚಿಯಲ್ಲಿ ಸ್ಪಷ್ಟ ನಿರ್ದೇಶನ ನೀಡುವ ಸಾದ್ಯತೆ ಇದೆ.
ಬೆಂಗಳೂರಿನಲ್ಲಿ ಪ್ರಮುಖವಾಗಿ ಎಂಜಿ ರಸ್ತೆ, ಬ್ರಿಗೇಡ್ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣ ವೃತ್ತ, ಕಂಠೀರವ ಕ್ರೀಡಾಂಗಣ ವೃತ್ತ ಹಾಗೂ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಪ್ರಮುಖ ರಸ್ತೆಗಳಲ್ಲೂ ರಾತ್ರಿ 11 ಗಂಟೆ ನಂತರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅದರಲ್ಲೂ ಪ್ರತಿ ವರ್ಷ ಅತ್ಯಂತ ಜನಸಂದಣಿಯಾಗುವ ಎಂಜಿ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಸಂಜೆ 6 ಗಂಟೆ ನಂತರ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗುವುದು ಎಂದರು.
ಈಗಾಗಲೇ ನಗರ ವ್ಯಾಪ್ತಿಗೆ ಒಳಪಡುವ ರೆಸಾರ್ಟ್, ಹೋಟೆಲ್, ರೆಸ್ಟೋರೆಂಟ್, ಕ್ಲಬ್ಗಳು ಸೇರಿದಂತೆ ಪ್ರತಿಯೊಬ್ಬರಿಗೂ ನಗರ ಪೆÇಲೀಸ್ ಆಯುಕ್ತ, ಬಿಬಿಎಂಪಿ ಅಕಾರಿಗಳು ಸೂಚನೆ ನೀಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಕಂದಾಯ ಇಲಾಖೆ ಬಿಡುಗಡೆ ಮಾಡಿರುವ ನಿಯಮಗಳನ್ನು ಚಾಚೂತಪ್ಪದೆ ಪಾಲನೆ ಮಾಡಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಅಂಥವರ ಮೇಲೆ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಎಚ್ಚರಿಸಲಾಗಿದೆ.
ಈಗಾಗಲೇ ಗೃಹ ಸಚಿವ ಬೊಮ್ಮಾಯಿ ಜೊತೆ ಡಿಜಿ, ವಲಯ ಐಜಿಪಿಗಳು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳು ಮತ್ತು ಎಲ್ಲಾ ಇಲಾಖೆಗಳ ಜೊತೆ ಚರ್ಚೆ ನಡೆಸಿ ಹೊಸ ವರ್ಷಾಚರಣೆಗೆ ಎಲ್ಲಿಯೂ ಅವಕಾಶ ನೀಡಬಾರದೆ ಎಂದು ಸೂಚಿಸಿದ್ದಾರೆ. ಅಕಾರಿಗಳು ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯದೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ನಿಯಮ ಮೀರಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.