Breaking News
Home / Uncategorized / ಮಂಗಳವಾರ ಮತದಾನ: ಮತದಾರರಿಗೆ ವಿಶೇಷ ಮನವಿ ಮಾಡಿದ ಆಯೋಗ

ಮಂಗಳವಾರ ಮತದಾನ: ಮತದಾರರಿಗೆ ವಿಶೇಷ ಮನವಿ ಮಾಡಿದ ಆಯೋಗ

Spread the love

ಬೆಂಗಳೂರು, ಮೇ 06: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಬಿಸಿಲಿನ ಝಳ, ಶಾಖದ ಅಲೆಯ ನಡುವೆಯೇ ಉತ್ತರ ಕರ್ನಾಟಕ ಭಾಗದಲ್ಲಿ ಜನರು ಮತದಾನ ಮಾಡಬೇಕಿದೆ. ಮತದಾನದ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಮತದಾರರಿಗೆ ವಿಶೇಷ ಮನವಿ ಮಾಡಿದೆ.

ರಾಜ್ಯ ಚುನಾವಣಾ ಆಯೋಗ ಪ್ರಕಟಣೆ ಮೂಲಕ ಮತದಾರರಿಗೆ ಮನವಿಯನ್ನು ಮಾಡಿದ್ದು, ಮತದಾನದ ದಿನದಂದು ಮತಗಟ್ಟೆಗಳಲ್ಲಿ ಬಿಸಿಲಿನ ತಾಪವನ್ನು ಗಮನದಲ್ಲಿಟ್ಟುಕೊಂಡು ಮತದಾರರಿಗೆ ಅನುಕೂಲವಾಗುವಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಮತದಾರರು ತಮಗೆ ಗೊತ್ತುಪಡಿಸಿದ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ವಿನಂತಿಸಲಾಗಿದೆ ಎಂದು ಹೇಳಿದೆ.

ಯಾವ-ಯಾವ ಕ್ರಮಗಳು

* ಮತಗಟ್ಟೆಗಳಲ್ಲಿ ಎಲ್ಲಾ ಕನಿಷ್ಠ ಸೌಲಭ್ಯಗಳಾದ ramp, ಕುಡಿಯುವ ನೀರು, ವಿದ್ಯುತ್, ಪೀಠೋಪಕರಣಗಳು, ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮತ್ತು ಮತದಾರರಿಗೆ ಸಹಾಯವಾಗಲು ಸಂಕೇತ ಫಲಕಗಳನ್ನು ಅಳವಡಿಸಲಾಗಿದೆ.

* ದಿವ್ಯಾಂಗ ಮತ್ತು ಹಿರಿಯ ನಾಗರಿಕ ಮತದಾರರಿಗೆ ಸಹಾಯ ಮಾಡಲು ಸಹಾಯಕರು ಲಭ್ಯವಿರುತ್ತಾರೆ.

* ಮತಗಟ್ಟೆಯ ಅಕ್ಕಪಕ್ಕದ ಕೊಠಡಿಗಳನ್ನು ವಿಶ್ರಾಂತಿ ಕೊಠಡಿಗಳನ್ನಾಗಿ ಮಾರ್ಪಡಿಸಿ ಸಿದ್ಧಗೊಳಿಸಲಾಗಿದೆ.

* ಎಲ್ಲೆಲ್ಲಿ ವಿಶ್ರಾಂತಿ ಕೊಠಡಿಗಳು ಲಭ್ಯವಿಲ್ಲವೋ, ಅಂತಹ ಮತಗಟ್ಟೆ ಆವರಣದಲ್ಲಿ ಶಾಮಿಯಾನ, ಫ್ಯಾನ್ ಮತ್ತು ಆಸನದ ವ್ಯವಸ್ಥೆ ಮಾಡಲಾಗಿದೆ.

* ಮತಗಟ್ಟೆ ಆವರಣದಲ್ಲಿ ಶೂಶ್ರೂಷಕರು/ ಆಶಾ ಕಾರ್ಯಕರ್ತರೊಂದಿಗೆ ORS/ ವೈದ್ಯಕೀಯ ಕಿಟ್‌ಗಳ ವ್ಯವಸ್ಥೆ ಮಾಡಲಾಗಿದೆ.

* ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಯ ಸೌಲಭ್ಯವಿರುತ್ತದೆ.

* ಮತದಾರರಿಗೆ ಈಗಾಗಲೇ ನೀಡಲಾಗಿರುವ ಮತದಾರರ ಚೀಟಿಗಳಲ್ಲಿ ಮತದಾನ ಹಾಗೂ ಮತಗಟ್ಟೆಗಳ ಕುರಿತು ಸೂಚನೆ ನೀಡಲಾಗಿದೆ. ಗೂಗಲ್ ನಕ್ಷೆಗಳ ಕ್ಯೂಆರ್ ಕೋಡ್ ಸಹ ಅಳವಡಿಕೆ ಮಾಡಿದ್ದು, ಎಲ್ಲಾ ಮನೆಗಳಿಗೆ ಚೀಟಿ ವಿತರಣೆ ಮಾಡಲಾಗಿದೆ.

* ನಗರ ಪ್ರದೇಶದ ಮತಗಟ್ಟೆಗಳನ್ನು ಗುರುತಿಸಲು ಕ್ಯುಆರ್ ಕೋಡ್ ಸಹಾಯ ಮಾಡುತ್ತದೆ. ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಗೂಗಲ್ ನಕ್ಷೆಗಳ ಮೂಲಕ ಮತದಾನ ಕೇಂದ್ರ ತಲುಪಲು ಸಹಾಯಕವಾಗಲಿದೆ.

ಮಂಗಳವಾರ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಾವಣಗೆರೆ ಸೇರಿ ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

14 ಲೋಕಸಭಾ ಕ್ಷೇತ್ರಗಳಲ್ಲಿ 560 ಮತಗಟ್ಟೆಗಳನ್ನು ಮಹಿಳೆಯರು ನಿರ್ವಹಣೆ ಮಾಡುತ್ತಾರೆ. 112 ಮತಗಟ್ಟೆಗಳನ್ನು ದಿವ್ಯಾಂಗರು ನಿರ್ವಹಿಸಲಿದ್ದಾರೆ. 224 ಇತರೆ ವಿಷಯಗಳ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆಗಳನ್ನು ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವಂತೆ ಅಲಂಕರಸಲಾಗಿದೆ.

ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. 6 ಗಂಟೆಯ ಬಳಿಕವೂ ಸರದಿ ಸಾಲಿನಲ್ಲಿ ನಿಂತ ಜನರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಜನರು ತಪ್ಪದೇ ಮತದಾನ ಮಾಡಿ ಎಂದು ಕರೆ ನೀಡಲಾಗಿದೆ.

ಮತದಾನ ಮಾಡಲು ಅನುಕೂಲವಾಗುವಂತೆ ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ) ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ.

ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ವ್ಯಾಪಾರ ಉದ್ಯಮಗಳು, ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅಧಿಕಾರಿ/ ಸಿಬ್ಬಂದಿಗಳು ಅಥವಾ ದಿನಗೂಲಿ ವೇತನದಲ್ಲಿ ಕೆಲಸ ಮಾಡುವ ಮತದಾರರು ತಮ್ಮ ಮತ ಚಲಾಯಿಸಲು ಅನುವು ಮಾಡಿಕೊಡಲು ಆರ್‌ಪಿ ಕಾಯ್ದೆ 1951ರ ಸೆಕ್ಷನ್ 135 ಬಿ ಪ್ರಕಾರ ಪಾವತಿಸಿದ ರಜೆಯನ್ನು ಮಂಜೂರು ಮಾಡಲು ಆದೇಶಿಸಲಾಗಿದೆ.


Spread the love

About Laxminews 24x7

Check Also

ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Spread the love ಗದಗ: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವಿಗೀಡಾಗಿ, ಓರ್ವ ಗಾಯಗೊಂಡ ದುರ್ಘಟನೆ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ