ಆಲಮಟ್ಟಿ: ಒಂದೇ ಒಂದು ಸರ್ಕಾರಿ ಹುದ್ದೆ ಗಿಟ್ಟಿಸಲು ಒದ್ದಾಡುವ ಈಗಿನ ಕಾಲದಲ್ಲಿ ಗ್ರಾಮೀಣ ಭಾಗದ, ಬಡತನದಲ್ಲಿ ಬೆಂದ ಯುವಕ ತನ್ನ ಪ್ರತಿಭೆಯಿಂದ ಪಡೆದಿದ್ದು ಬರೋಬ್ಬರಿ ಏಳು ಸರ್ಕಾರಿ ನೌಕರಿ.
ಹೌದು, ಇವರು ಸಮೀಪದ ಬೇನಾಳ ಆರ್.ಎಸ್. ಗ್ರಾಮದ 35ರ ವಯೋಮಾನದ ಅಡಿವೆಪ್ಪ ಸಿದ್ರಾಮಪ್ಪ ಹಂಡಿ.
ದುಡಿಯಲು ಹೋದರೆ ಮಾತ್ರ ಊಟ, ಇಲ್ಲದಿದ್ದರೆ ಉಪವಾಸ ಎನ್ನುವಂತಹ ಕುಟುಂಬದ ಸ್ಥಿತಿ. ಬೇನಾಳ ಗ್ರಾಮದ ಸಿದ್ರಾಮಪ್ಪ-ಲಕ್ಷ್ಮಿ ದಂಪತಿಯ ಪುತ್ರ ಅಡಿವೆಪ್ಪ, ಚಿಕ್ಕವನಿದ್ದಾಗಲಿನಿಂದಲೂ ಛಲ ಹಾಗೂ ಬಿಸಿಎಂ ಹಾಸ್ಟೆಲ್ ನಲ್ಲಿದ್ದೇ ಓದಿದ್ದು.
ಪ್ರಾಥಮಿಕ ಶಿಕ್ಷಣ ಬೇನಾಳದಲ್ಲಿ, ಪ್ರೌಡ ಹಾಗೂ ಕಾಲೇಜ್ ಶಿಕ್ಷಣ ನಿಡಗುಂದಿಯಲ್ಲಿ ಪೂರೈಸಿರುವ ಇವರು ಬಿಎಸ್ ಸಿ, ಬಿಇಡಿ ಪದವಿಧರ.
ಏಳು ನೌಕರಿ: 2019 ರಲ್ಲಿ ಕೆಪಿಎಸ್ ಸಿ ನಡೆಸುವ ಪರೀಕ್ಷೆಯಲ್ಲಿ ಪಾಸಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಕಿರಿಯ ಸಹಾಯಕನಾಗಿ 2019 ಡಿಸೆಂಬರ್ ನಲ್ಲಿ ನೇಮಕ. ನಂತರ 2021 ರಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೊರ್ಜಾಜಿ ದೇಸಾಯಿ ವಸತಿ ಶಾಲೆಯಲ್ಲಿ ನಿಲಯ ಪಾಲಕರಾಗಿ ಆಯ್ಕೆ, ನಂತರ ಅದೇ ಇಲಾಖೆಯಲ್ಲಿ ಗಣಿತ ಶಿಕ್ಷಕರಾಗಿಯೂ ನೇಮಕ. ನಂತರ ಅದೇ ಇಲಾಖೆಯ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ನಿಲಯ ಪಾಲಕ ಹುದ್ದೆಗೆ ಅಡಿವೆಪ್ಪ ಹಂಡಿ ಆಯ್ಕೆಯಾದರು.
ಆಗಸ್ಟ್ 2022 ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಅದೇ ಹುದ್ದೆಯಲ್ಲಿ ಬಸವನಬಾಗೇವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ಧಾರೆ ಅಡಿವೆಪ್ಪ.
ಕಳೆದ ತಿಂಗಳು ಕೆಪಿಎಸ್ಸಿ ಬಿಡುಗಡೆ ಮಾಡಿರುವ ಆಯ್ಕೆ ಪಟ್ಟಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ (ಪ್ರತ್ಯೇಕವಾಗಿ ಆಯ್ಕೆ) ಈ ಎರಡೂ ಇಲಾಖೆಯಲ್ಲಿಯೂ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಅಡಿವೆಪ್ಪ ನೇಮಕಗೊಂಡಿದ್ದಾರೆ.
‘ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನಾನು ಹೋಗಲು ಬಯಸಿದ್ದೇನೆ. ಅಭ್ಯಾಸ, ಏನಾದರೂ ಆಗಬೇಕೆಂಬ ಛಲದಿಂದ ಈ ಎಲ್ಲಾ ನೌಕರಿಗಳು ಒಲಿದಿವೆ. ನಾನು ಒಮ್ಮೆ ಕೆಎಎಸ್ ಪರೀಕ್ಷೆ ಪೂರ್ವಭಾವಿ ಪರೀಕ್ಷೆ ಪಾಸಾಗಿ ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾಗಲಿಲ್ಲ. ಪ್ರಯತ್ನ ಮಾತ್ರ ಕೈಬಿಟ್ಟಿಲ್ಲ’ ಎಂದರು.
‘ನಾನು ಹಾಸ್ಟೆಲ್ ನಲ್ಲಿಯೇ ಕಲಿತು ಬೆಳೆದಿದ್ದೇನೆ. ಈಗ ಹಾಸ್ಟೆಲ್ನ ನಿಲಯ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ, ಮಾರ್ಗದರ್ಶನ, ಕಲಿಕೆ ಸೇರಿದಂತೆ ನಾನಾ ಕೌಶಲ್ಯಗಳನ್ನು ಬೆಳೆಸುತ್ತಿದ್ದೇನೆ’ ಎಂದು ಅಡಿವೆಪ್ಪ ಹೇಳಿದರು.
‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರತಿ ವರ್ಷ ಕೆಎಎಸ್ ಪರೀಕ್ಷಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಪಡೆಯಲು ಪರೀಕ್ಷೆ ನಡೆಸುತ್ತದೆ. ಅದರಲ್ಲಿ ಆಯ್ಕೆಯಾಗಿ ಕೆಲ ತಿಂಗಳು ಮಾತ್ರ ತರಬೇತಿ ಪಡೆದಿದ್ದೆ. ಇದು ಕೂಡಾ ನನಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹಾಯವಾಯಿತು’ ಎಂದರು.