ರಾಯಚೂರು ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪತಿ, ಕಾಂಗ್ರೆಸ್ ಮುಖಂಡ ಬಷರುದ್ದಿನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೈ ಶ್ರೀರಾಮ ಎಂದಾಗ ಪೊಲೀಸರು ಬೂಟಲ್ಲಿ ಹೊಡೆದು ಒಳಗೆ ಹಾಕಬೇಕಿತ್ತು ಎಂದು ಬಷರುದ್ದಿನ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಯಚೂರು, ಮೇ 04: ಜೈ ಶ್ರೀರಾಮ (Jai Shri ram) ಎಂದಾಗ ಪೊಲೀಸರು (Police) ಬೂಟಲ್ಲಿ ಹೊಡೆದು ಒಳಗೆ ಹಾಕಬೇಕಿತ್ತು ಅಂತ ಕಾಂಗ್ರೆಸ್ (Congress) ಮುಖಂಡ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪತಿ ಬಷರುದ್ದಿನ್ ಆಡಿರುವ ಮಾತಿನ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಮುಖಂಡ ಬಷರುದ್ದಿನ್ ಹೇಳಿಕೆ ಖಂಡಿಸಿ ರಾಯಚೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ (Shivaraj Patil) ನೇತೃತ್ವದಲ್ಲಿ ಬಿಜೆಪಿ (BJP) ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನೂರಾರು ಜನ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಆಗಮಿಸಿ, ದೂರು ಸ್ವೀಕರಿಸಿದರು.
ಘಟನೆ ಸಂಬಂಧ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಮಾತನಾಡಿ, ಬಷರುದ್ದಿನ್ ಹೇಳಿಕೆಯಿಂದ ದೇಶಕ್ಕೆ ಮತ್ತು ಸಮಾಜಕ್ಕೆ ಅವಮಾನವಾಗಿದೆ. ಈತನನ್ನು ಪೊಲೀಸರು ಬಂಧಿಸಿ ಲೆದರ್ ಬೂಟಿನಿಂದ ಹೊಡೆಯಬೇಕು. ನಾವು ಜೈ ಶ್ರೀರಾಮ, ಇನ್ ಶಾ ಅಲ್ಲಾ, ಯೇಸುಕ್ರಿಸ್ತನ ಪರ ಘೋಷಣೆ ಕೂಗುತ್ತೇವೆ. ಇದು ನಮಗೆ ಸಂವಿಧಾನ ಕೊಟ್ಟ ಹಕ್ಕು ಅಂತ ಆಕ್ರೋಶ ವ್ಯಕ್ತಪಡಿಸಿದರು.
ಬಷರುದ್ದಿನ್ ಹೇಳಿಕೆ ಹಿಂದಿನ ಘಟನೆ
ರಾಯಚೂರು ನಗರದ ತೀನ್ ಕಂದೀಲ್ ಸರ್ಕಲ್ ಬಳಿ ಹಜರತ್ ಸಯ್ಯದ್ ಶಾಹ ಅಲ್ಲಾವುದ್ದಿನ್ ದರ್ಗಾ ಇದೆ. ಈ ದರ್ಗಾ ಎದುರು ಮುಸ್ಲಿಂ ಸಮುದಾಯದವರು ಕಮಾನ್ ನಿರ್ಮಿಸುತ್ತಿದ್ದರು. ದರ್ಗಾದ ಕಮಾನ್ ನಿರ್ಮಿಸುತ್ತಿರುವ ಪ್ರದೇಶದ ಬಳಿ ಐತಿಹಾಸಿಕ ರಾಯಚೂರು ಕೋಟೆ ಇದೆ.
ಕರ್ನಾಟಕ ಪುರಾತತ್ವ ಇಲಾಖೆಯ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವದ ಸ್ಥಳಗಳು, ಅವಶೇಷಗಳ ಕಾಯ್ದೆಯಡಿ, ಆಯಾ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ. ಅಷ್ಟೇ ಅಲ್ಲದೇ 200 ಮೀಟರ್ ಪ್ರದೇಶ ನಿಯಂತ್ರಿತ ಪ್ರದೇಶವಾಗಿರುತ್ತಿದೆ. ಹೀಗಾಗಿ ಪುರಾತನ ಕಟ್ಟಡಗಳ ಸುತ್ತ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.