ಡಾಲಿ ಧನಂಜಯ್ (Dhananjay) ನಟನೆಯ ಹೆಡ್ ಬುಷ್ (Head Bus) ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಎರಡೆರಡು ವಿವಾದಗಳು ಚಿತ್ರತಂಡಕ್ಕೆ ಅಂಟಿಕೊಂಡಿವೆ. ಈಗಾಗಲೇ ವೀರಗಾಸೆ ಕಲಾವಿದರಿಗೆ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು, ಇದೀಗ ಚಿತ್ರದಲ್ಲಿ ಕರಗ ಆಚರಣೆ ಬಗ್ಗೆ ಮತ್ತು ಕರಗ ಹೊತ್ತವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ ಕೇಳಿ ಬಂದಿದೆ.
ಹೆಡ್ ಬುಷ್ ಚಿತ್ರದಲ್ಲಿ ದ್ರೌಪದಮ್ಮನ ಕರಗಕ್ಕೆ ಅವಮಾನ ಮಾಡಲಾಗಿದೆ ಎಂದು ಧರ್ಮರಾಯ ದೇವಸ್ಥಾನ ಅಧ್ಯಕ್ಷ ಸತೀಶ್ ಆರೋಪ ಮಾಡಿದ್ದಾರೆ. ಹಾಗಾಗಿ ಚಿತ್ರದಲ್ಲಿ ಕರಗದ ಬಗ್ಗೆ ತೋರಿಸಲಾದ ಸೀನ್ಗಳನ್ನು ತೆಗೆಯುವಂತೆ ಅವರು ಆಗ್ರಹ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಸತೀಶ್, ‘ಸಿನಿಮಾದಲ್ಲಿ ತೋರಿಸಲಾಗಿದ್ದು ನಮ್ಮ ತಿಗಳರ ಪೇಟೆಯ ಕರಗ ಅಲ್ಲ. ಹೆಸರಘಟ್ಟದ ಕರಗವನ್ನು ತೋರಿಸಿ, ತಿಗಳರ ಕರಗ ಎಂದು ತೋರಿಸಲಾಗಿದೆ. ಚಿತ್ರದಲ್ಲಿ ಜುಜುಬಿ ಕರಗ ಅಂತ ಹೆಸರು ಬಳಕೆ ಮಾಡಲಾಗಿದೆ. ಇದು ಸರಿಯಲ್ಲ’ ಎಂದಿದ್ದಾರೆ.
ಅಷ್ಟೇ ಅಲ್ಲದೇ, ಸಿನಿಮಾದಲ್ಲಿ ಅರ್ಚಕರಾದ ಶಿವಶಂಕರ್ ಎಂಬುವರ ಹೆಸರು ಕೂಡ ದುರ್ಬಳಕೆ ಮಾಡಲಾಗಿದೆ ಎಂದು ಸತೀಶ್ ಆರೋಪಿಸುತ್ತಾರೆ. ಅವರನ್ನು ಏಕವಚನದಲ್ಲಿ ಸಂಬೋಧಿಸುವುದು ಸರಿಯಲ್ಲ ಎಂದಿದ್ದಾರೆ. ಕರಗಕ್ಕೆ (Karaga) ಅನೇಕ ಸಂಪ್ರಯದಾಯಗಳು ಇವೆ. ಅದೆಲ್ಲವನ್ನು ಸಿನಿಮಾದಲ್ಲಿ ಉಲ್ಲಂಘನೆ ಮಾಡಲಾಗಿದೆ. ಇದಕ್ಕಾಗಿ ಇಂದು ನಾವೆಲ್ಲ ಚರ್ಚಿಸಿ ಮೊದಲು ಫಿಲ್ಮ್ ಚೇಂಬರ್ಗೆ ದೂರು ನೀಡುತ್ತೇವೆ ಎನ್ನುತ್ತಾರೆ.