ಬೆಂಗಳೂರು: ಹಿಂದಿ ದಿವಸ್ ಆಚರಣೆ ವಿಚಾರ ವಿಧಾನಸಭೆಯಲ್ಲೂ ಗದ್ದಲಕ್ಕೆ ಕಾರಣವಾಗಿದ್ದು, ಜೆಡಿಎಸ್ ಶಾಸಕರು ಕನ್ನಡ ಶಾಲು ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಡಾ. ಅನ್ನದಾನಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಎದ್ದು ನಿಂತ ಜೆಡಿಎಸ್ ಶಾಸಕರು ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎಂದು ಏರಿದ ಧ್ವನಿಯಲ್ಲಿ ಮಾತನಾಡಿದರು.
ಇದು ಸ್ಪೀಕರ್ ಕಾಗೇರಿ ಅವರನ್ನು ಕೆರಳಿಸಿತು.ಏನಿದು ಜಾತ್ರೆನಾ ? ಸಂತೆನಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಏನಿದು ಹುಚ್ಚಾಸ್ಪತ್ರೆಯಲ್ಲಿ ಮಾತನಾಡಿದ ಹಾಗೆ ಮಾತನಾಡುತ್ತೀರಿ ಎಂದು ಸ್ಪೀಕರ್ ಕಾಗೇರಿ ಗರಂ ಆದರು.
ಇದಕ್ಕೆ ಸ್ಪಷ್ಟನೆ ನೀಡಿದ ಎಚ್. ಡಿ. ಕುಮಾರಸ್ವಾಮಿ ,ನಮ್ಮ ಸದಸ್ಯರು ಸದನದಲ್ಲಿ ಗಮನ ಸೆಳೆಯಲು ಮುಂದಾಗಿದ್ದಾರೆ. ಸದನದ ಕಲಾಪಕ್ಕೆ ಅಡ್ಡಿ ಮಾಡುವ ಉದ್ದೇಶ ಇಲ್ಲ. ದೇಶದಲ್ಲಿ 56 ಕ್ಕೂ ಹೆಚ್ಚು ಭಾಷೆಗಳು ಇವೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದು ರಾಷ್ಟ್ರ ಒಂದು ಭಾಷೆ ಎಂಬ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಭಾಷೆಯ ಬಗ್ಗೆ ಆಯಾ ರಾಜ್ಯಗಳಲ್ಲಿ ಅವರದ್ದೇ ಆದ ಭಾವನಾತ್ಮಕ ಸಂಬಂಧ ಇದೆ. ಬಲವಂತವಾಗಿ ಭಾಷೆ ಕತ್ತು ಹಿಸುಕುವ ಕೆಲಸ ಆಗಬಾರದು. ಸದನದ ಮೂಲಕ ಮನವಿ ಸಲ್ಲಿಸುವುದು ನಮ್ಮ ಸದಸ್ಯರ ಅಹವಾಲು ಎಂದರು.