ಬೆಂಗಳೂರು : ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ” ತನಿಖಾ ತಿರುಗೇಟು” ನೀಡಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಲ್ಲಿ 430 ಕೋಟಿ ರೂ.ಅವ್ಯವಹಾರ ನಡೆದಿದೆ ಎಂದು ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ವಿಷಯ ಪ್ರಸ್ತಾಪಿಸಿದರು.
ಆದರೆ ಸರಕಾರ ಸಮರ್ಪಕ ಉತ್ತರ ನೀಡಿಲ್ಲ ಎಂದು ಶಾಸಕರಾದ ಪ್ರಿಯಾಂಕ ಖರ್ಗೆ ,ಯತೀಂದ್ರ ಸಿದ್ದರಾಮಯ್ಯ, ಪ್ರಸಾದ್ ಅಬ್ಬಯ್ಯ, ಭೀಮಾ ನಾಯಕ್ ಹಾಗೂ ಉಳಿದ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಕಲಾಪದ ಬಳಿಕ ಸಭೆ ನಡೆಸೋಣ ಎಂದರೂ ಪ್ರತಿಭಟನೆ ಹಿಂಪಡೆಯಲಿಲ್ಲ.
ಈ ವಿಚಾರವನ್ನು ಕಾಂಗ್ರೆಸ್ ಸದನದ ಹೊರಗೆ ಅಸ್ತ್ರವಾಗಿ ಬಳಸಬಹುದೆಂಬುದನ್ನು ಮನಗಂಡ ಸಿಎಂ ಬೊಮ್ಮಾಯಿ, ತಕ್ಷಣ ಈ ವಿಚಾರವನ್ನು ತನಿಖೆಗೆ ಒಪ್ಪಿಸುತ್ತೇನೆ. 2018 ರಿಂದ ಇಲ್ಲಿಯವರೆಗೆ ನಡೆದ ಎಲ್ಲ ಪ್ರಕರಣವನ್ನು ತನಿಖೆಗೆ ಒಪ್ಪಿಸುತ್ತೇವೆ ಎಂದಾಗ ಕಾಂಗ್ರೆಸ್ ಪ್ರತಿಭಟನೆ ವಾಪಾಸ್ ಪಡೆಯಿತು.