ಹಾವೇರಿ: ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಿಗೆ ನಡೆಯಬೇಕಾಗಿದ್ದ ಉಪಚುನಾವಣೆಯನ್ನ ಅಕ್ಟೋಬರ್ 30 ರಂದು ನಡೆಸಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ತಂತ್ರ-ಪ್ರತಿತಂತ್ರದ ಬಗ್ಗೆ ಚರ್ಚೆಗಳು ಶುರುವಾಗಿದೆ.
ಜೋಡೆತ್ತುಗಳ ಹೋರಾಟ
ಮೂಲಗಳ ಪ್ರಕಾರ ಹಾನಗಲ್ನಲ್ಲಿ ಜೋಡೆತ್ತುಗಳ ಪಾಲಿಟಿಕ್ಸ್ ಜೋರಾಗಲಿದ್ಯಂತೆ. ಚುನಾವಣಾ ಅಖಾಡದಲ್ಲಿ ತೊಡೆತಟ್ಟಲು ಘಟಾನುಘಟಿ ನಾಯಕರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಅದರಂತೆ ಬಿಜೆಪಿಯಿಂದ ಬಿಎಸ್ವೈ ಮತ್ತು ಬಸವರಾಜ್ ಬೊಮ್ಮಾಯಿ ಹಾಗೂ ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೋಡಿ ಚುನಾವಣೆಯಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.
ಬೊಮ್ಮಾಯಿಗೆ ಗುರು ಉದಾಸಿ
ತಮ್ಮ ಗುರು ಸಿಎಂ ಉದಾಸಿ ಕ್ಷೇತ್ರವನ್ನ ಗೆಲ್ಲಲೇ ಬೇಕೆಂದು ನಿರ್ಧರಿಸಿರುವ ಬೊಮ್ಮಾಯಿಗೆ ಮಾಜಿ ಬಿ.ಎಸ್.ಯಡಿಯೂರಪ್ಪ ಸಾಥ್ ನೀಡಲಿದ್ದಾರೆ. ಯಾಕಂದ್ರೆ ಸಿಎಂ ಉದಾಸಿ ಬಿಎಸ್ವೈ ಅವರ ಪರಮ ಆಪ್ತರಲ್ಲಿ ಒಬ್ಬರಾಗಿದ್ದರು. ಹೀಗಾಗಿ ಶತಾಯ, ಗತಾಯ ಮಾಡಿ ಕ್ಷೇತ್ರವನ್ನ ತಮ್ಮ ತೆಕ್ಕೆಯಲ್ಲೇ ಇಟ್ಟುಕೊಳ್ಳಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಕಾಂಗ್ರೆಸ್ ಪ್ಲಾನ್
ಇತ್ತ ಸಿಎಂ ಜಿಲ್ಲೆಯಲ್ಲೇ ಗೆದ್ದು ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ ಎಂದು ಸಾಬೀತು ಮಾಡಲು ಕಾಂಗ್ರೆಸ್ ಜೋಡೆತ್ತು ಸಿದ್ಧತೆ ನಡೆಸಿದ್ಯಂತೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಿದ್ದಾಜಿದ್ದಿನ ಫೈಟ್ ನಡೆಸಿ, ಹಾನಗಲ್ ಕ್ಷೇತ್ರವನ್ನ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ನಾಯಕರುಗಳು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೇ ಹಾನಗಲ್ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡರೆ ಮುಂದಿನ ಚುನಾವಣೆಗೂ ಇದು ದಿಕ್ಸೂಚಿ ಆಗಲಿದೆ. ಅದರಂತೆಯೇ ಸಿಎಂ ಜಿಲ್ಲೆಯ ಹಾನಗಲ್ ಕ್ಷೇತ್ರದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ ಎನ್ನಲಾಗಿದೆ. ಹೀಗಾಗಿ ಹಾನಗಲ್ ವಿಧಾನಸಭಾ ಕ್ಷೇತ್ರ ಈ ಬಾರಿ ಜೋಡೆತ್ತುಗಳ ಕದನಕ್ಕೆ ಸಾಕ್ಷಿಯಾಗಲಿದೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.