ಬೆಳಗಾವಿ: ಕೋರ್ಟ್ ಆವರಣದಲ್ಲಿ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದಿವಾಣಿ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ಅಡಕಿ (35) ಪತ್ನಿ ಜಯಮಾಲಾ (33) ಮೇಲೆ ಹಲ್ಲೆ ಮಾಡಿದ್ದು, ಮಾರಕಾಸ್ತ್ರದಿಂದ ಪತ್ನಿಯ ತಲೆ ಹಾಗೂ ಕಾಲಿಗೆ ಕೊಚ್ಚಿದ ಕೊಲೆ ಮಾಡಲು ಯತ್ನಿಸಿದ್ದಾನೆ.
ಪತಿ-ಪತ್ನಿಯ ಕೌಟುಂಬಿಕ ಕಲಹದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇಂದು ಪ್ರಕರಣದ ವಿಚಾರಣೆಗೆ ಹಾಜರಾಗ ಬೇಕಿದ್ದ ಹಿನ್ನೆಲೆಯಲ್ಲಿ ಪತ್ನಿ ಜಯಮಾಲಾ ಕೋರ್ಟ್ಗೆ ಆಗಮಿಸಿದ್ದರು. ಪತಿ ಜೊತೆಗೆ ಜಗಳ ಮಾಡಿಕೊಂಡಿದ್ದ ಪತ್ನಿ ಜಯಮಾಲಾ ಗಂಡನ ಮನೆ ತೊರೆದು ತವರು ಮನೆ ಹುಬ್ಬಳ್ಳಿ ತಾಲೂಕಿನ ವರೂರದಲ್ಲಿ ವಾಸವಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬ್ಯಾಂಕ್ ನಲ್ಲಿರುವ ಹಣದ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದ್ದು, ಸದ್ಯ ಗಂಭೀರವಾಗಿ ಗಾಯಗೊಂಡಿರುವ ಜಯಮಾಲಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾರೆ ಎನ್ನಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.