ರಾಯಚೂರು: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯ ಮಠದಲ್ಲಿ ಪಂಚಾಮೃತ ವಿತರಣೆ ನಿಷೇಧಿಸಲಾಗಿದೆ. ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಭಕ್ತರಿಗೆ ವಿತರಿಸುವ ಪಂಚಾಮೃತ ನಿಲ್ಲಿಸಲಾಗಿದೆ. ಎಲ್ಲ ವೃಂದಾವನಗಳಿಗೂ ಎಂದಿನಂತೆ ಪಂಚಾಮೃತಾಭೀಷೆಕ ನಡೆಯುತ್ತದೆ. ಆದರೆ ಶನಿವಾರದಿಂದ ಭಕ್ತರಿಗೆ ವಿತರಿಸುವುದನ್ನು ಮಾತ್ರ ನಿಲ್ಲಿಸಲಾಗಿದೆ.
ಬೆಳಗ್ಗೆ ಹಾಗೂ ಸಂಜೆಯ ಪ್ರಸಾದ ಹಾಗೂ ದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ. ಜನತೆ ಮಠಕ್ಕೆ ಬರಬಾರದು ಎನ್ನುವ ವದಂತಿಗಳು ಹಬ್ಬುತ್ತಿವೆ. ಇದಾವುದಕ್ಕೂ ಕಿವಿಗೊಡದೆ, ಭಕ್ತರು ರಾಯರ ದರ್ಶನಕ್ಕೆ ಬರಬಹುದು. ಆದರೆ ವಿದೇಶದಿಂದ ಬರುವಗಿಗೆ ಮಾತ್ರ ಕೆಲದಿನಗಳ ನಿರ್ಬಂಧ ಹೇರಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ದರ್ಶನ ಬಂದ್ ಎನ್ನುವ ವದಂತಿ ಹಬ್ಬಿದ ಹಿನ್ನೆಲೆ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹೀಗಾಗಿ ಮಠದ ಆಡಳಿತ ಮಂಡಳಿ ಈ ಕುರಿತು ಸ್ಪಷ್ಟಪಡಿಸಿದೆ.
ಇದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಲ್ಯಾಣ ಮಂಟಪಗಳ ಬುಕ್ಕಿಂಗ್ನ್ನು ಇಪ್ಪತ್ತು ದಿನಗಳಕಾಲ ಬಂದ್ ಮಾಡಿದೆ. ಲೋಕ ಕಲ್ಯಾಣಕ್ಕಾಗಿ ಮಾರ್ಚ್ 22 ಕ್ಕೆ ಧನ್ವಂತರಿ ಹೋಮ ಹಮ್ಮಿಕೊಂಡಿದೆ. ಜಪ ತಪಗಳು ನಿರಂತರವಾಗಿ ನಡೆದಿದೆ. ಎಲ್ಲ ಶಾಖಾ ಮಠಗಳಲ್ಲಿ ಹೋಮ ನೆರವೇರಿಸುವಂತೆ ಸೂಚಿಸಲಾಗಿದೆ. ಕೆಮ್ಮು ನೆಗಡಿ ಜ್ವರ ಇರುವ ಭಕ್ತರು ಮನೆಯಲ್ಲೇ ರಾಯರನ್ನು ಜಪಿಸುವಂತೆ ಹೇಳಿದೆ. ಮಠಕ್ಕೆ ಬರುವ ಭಕ್ತರಿಗೆ ಎರಡು ಮೂರು ದಿನಗಳ ಕಾಲ ಉಳಿಯಬೇಡಿ, ದರ್ಶನ ಮಾಡಿಕೊಂಡು ಹೊರಡಿ ಎಂದು ಆಡಳಿತ ಮಂಡಳಿ ಸೂಚಿಸಿದೆ.