ನವದೆಹಲಿ: ಆ ವೈರಿ ವೈರಸ್ ಭಾರತಕ್ಕೆ ಬರುತ್ತಾ? ಬರಬಹುದಾ? ಒಂದು ವೇಳೆ ಬಂದ್ರೆ ಮುಂದೇನು? ಅಂತಾ ಕಾಡಿದ್ದ ಪ್ರಶ್ನೆಗಳ ಗೊಂದಲಿಗೆ ಒಂದು ಉತ್ತರವಂತೂ ಸಿಕ್ಕಿದೆ. ಇಡೀ ಭಾರತದಲ್ಲೇ ಮೊದಲ ಬಾರಿಗೆ ಒಮಿಕ್ರಾನ್ ಕಾಣಿಸಿಕೊಂಡಿದೆ. ಬೆಂಗಳೂರಿನ ಏರ್ಪೋರ್ಟ್ ಗೇಟ್ ಮೂಲಕ ರಾಜ್ಯಕ್ಕೆ ಎಂಟ್ರಿ ಕೊಟ್ಟ, ಒಮಿಕ್ರಾನ್ ಓಡಿಸಲು ಸಿಎಂ ಬೊಮ್ಮಾಯಿ ಇಂದು ಮಹತ್ವದ ಮೀಟಿಂಗ್ ಫಿಕ್ಸ್ ಮಾಡಿದ್ದಾರೆ.
ಇಬ್ಬರು ವ್ಯಕ್ತಿಗಳಲ್ಲಿ ರಹಸ್ಯವಾಗಿ ಅಡಗಿ ಕೂತು ಸೌತ್ ಆಫ್ರಿಕಾದಿಂದ ಸದ್ದಿಲ್ಲದೇ ವಿಮಾನದ ಮೂಲಕ ಭಾರತಕ್ಕೆ ಒಮಿಕ್ರಾನ್ ಎಂಟ್ರಿಕೊಟ್ಟಿದ್ದಾಗಿದೆ. ಎಲ್ಲೆಡೆ ಅಲರ್ಟ್ ಘೋಷಿಸಿದ್ರೂ, ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ರೂ ಸಹ ಕರ್ನಾಟಕದಲ್ಲಿ ವಕ್ಕರಿಸಿಬಿಟ್ಟ ಒಮಿಕ್ರಾನ್ ಅನ್ನ ಓಡಿಸುವ ಮಹತ್ವದ ಜವಾಬ್ದಾರಿ ಇದೀಗ ಮತ್ತಷ್ಟು ಭಾರವಾಗಿ ಬೊಮ್ಮಾಯಿ ಟೀಮ್ ಹೆಗಲಿಗೇರಿದೆ.
ಹೊಸ ರೂಪಾಂತರಿಯ ಕಂಟ್ರೋಲ್ಗಾಗಿ ರಣತಂತ್ರ!
ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಪ್ರಯಾಣಿಸಿದ್ದ ಇಬ್ಬರಲ್ಲಿ ಮೊದಲಿಗೆ ಕಾಣಿಸಿಕೊಂಡ ಒಮಿಕ್ರಾನ್, ಇದೀಗ ನಗರದಲ್ಲಿ ಒಟ್ಟು ಐವರನ್ನು ಪಾಸಿಟಿವ್ ಆಗುವಂತೆ ಮಾಡಿದೆ. ನೂತನ ತಳಿಯ ಅಟ್ಟಹಾಸ ಮಿತಿಮೀರುವ ಮುನ್ನ, ಸೂಕ್ತ ಕ್ರಮ ಕೈಗೊಳ್ಳಲು ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ನಿನ್ನೆ ರಾತ್ರಿ ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಮುಂದಿನ ಹೆಜ್ಜೆ ಏನು ಎನ್ನೋದನ್ನ ಸರ್ಕಾರ ನಿರ್ಧರಿಸಲಿದೆ ಅಂದ್ರು.