ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ರಚನೆ ಮಾಡಿರುವ ಎಸ್ಐಟಿ ಸಂಪೂರ್ಣವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅಧೀನದಲ್ಲಿದೆ. ಅವರು ಹೇಳಿದಂತೆ ಕೆಲಸ ಮಾಡುತ್ತದೆ. ಹೀಗಾಗಿ ಅದರ ಮೇಲೆ ವಿಶ್ವಾಸ ಇಡಲಾಗದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ, ಮೇ 7: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣದ ಚರ್ಚೆ ದೇಶದಾದ್ಯಂತ ನಡೆಯುತ್ತಿರುವ ಬೆನ್ನಲ್ಲೇ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಸಿಡಿ ಫ್ಯಾಕ್ಟರಿ ಓಪನ್ ಆಗಲಿದೆ ಎಂದು ಅವರು ಹೇಳಿದ್ದಾರೆ. ಇದು ಯಾರಿಗೆ ಸಂಬಂಧಿಸಿದ್ದು, ಯಾರು ಮಾಡುತ್ತಿದ್ದಾರೆ ಇತ್ಯಾದಿ ಯಾವ ವಿವರವನ್ನೂ ಅವರು ಬಹಿರಂಗಪಡಿಸಿಲ್ಲ.
ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಮತ ಚಲಾಯಿಸಿ ಬಳಿಕ ಮಾತನಾಡಿದ ಅವರು, ಪ್ರಜ್ವಲ್ ಅಶ್ಲೀಲ ವಿಡಿಯೋ ಬಹಿರಂಗವಾಗಿದ್ದರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿದರು. ಸೋಮವಾರ ವಕೀಲ, ಬಿಜೆಪಿ ನಾಯಕ ದೇವೇರಾಜೇ ಗೌಡರು ಆರೋಪಿಸಿದಂತೆ ಪ್ರಕರಣದಲ್ಲಿ ಡಿಕೆಶಿ ಕೈವಾಡ ಇರುವುದು ಸ್ಪಷ್ಟ ಎಂದು ಹೇಳಿದರು.
ರಾಜ್ಯ ಸರ್ಕಾರ ರಚನೆ ಮಾಡಿರುವ ಎಸ್ಐಟಿ ಸಂಪೂರ್ಣವಾಗಿ ಡಿಕೆ ಶಿವಕುಮಾರ್ ವಶದಲ್ಲಿದೆ. ಅವರ ಆಣತಿಯಂತೆ ಕೆಲಸ ಮಾಡುತ್ತದೆ ಎಂದು ಯತ್ನಾಳ್ ದೂರಿದರು.