ಬಳ್ಳಾರಿ: ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿ, ಕದ್ದುಮುಚ್ಚಿ ಮದ್ಯ ಮಾರಾಟ ಮಾಡಿದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಮುಖಂಡ ಡಿ.ರಾಘವೇಂದ್ರನನ್ನು ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಇಡೀ ದೇಶವೇ ಕೊರೊನಾ ಭೀತಿಯಿಂದ ಲಾಕ್ಡೌನ್ ಆಗಿದೆ. ಆದರೂ ಬಿಜೆಪಿ ಮುಖಂಡನ ಮಾಲೀಕತ್ವದ ಮದ್ಯದಂಗಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ಇರುವ ಮದ್ಯದಂಗಡಿಯ ಮೇಲೆ ಅಬಕಾರಿ ಇಲಾಖೆ ದಾಳಿ ಮಾಡಿದ್ದರು. ಬಿಜೆಪಿ ಮುಖಂಡ ರಾಘವೇಂದ್ರ ಮಾಲೀಕತ್ವದ ಮದ್ಯದಂಗಡಿ ಸೇರಿದಂತೆ ಮೂರು ಬಾರ್ ಮೇಲೆ ದಾಳಿ ನಡೆಸಲಾಗಿದೆ.
ರಾಘವೇಂದ್ರ ಸಂಡೂರನಲ್ಲಿರುವ ಕಾರ್ತಿಕ್ ರೆಸಿಡೆನ್ಸಿ ಬಾರ್ ಆ್ಯಂಡ್ ರೆಸ್ಟಾರೆಂಟ್ ಮಾಲೀಕನಾಗಿದ್ದು, ಈ ಹಿಂದೆಯೇ ಲಾಕ್ಡೌನ್ ಸಮಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದಂಗಡಿಯನ್ನು ಶೀಲ್ಡ್ ಮಾಡಿದ್ದರು. ಹೀಗಾಗಿ ಕದ್ದುಮುಚ್ಚಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದ ಆರೋಪದಡಿ ಬಿಜೆಪಿ ಮುಖಂಡ ಡಿ.ರಾಘವೇಂದ್ರನನ್ನು ಬಂಧಿಸಲಾಗಿದೆ. ರಾಘವೇಂದ್ರ ಸೇರಿದಂತೆ ಮೂರು ಬಾರ್ ಮಾಲೀಕರನ್ನು ಬಂಧಿಸಲಾಗಿದೆ