ಮನೆಯಲ್ಲಿಯೇ ಉಳಿದು ಕರೋನಾ ಹರಡದಂತೆ ಸಹಕರಿಸಿ
ಲಾಕ್ಡೌನ್ ಅವಧಿ ವಿಸ್ತರಣೆ- ಅನಗತ್ಯ ಬೀದಿಗಿಳಿದರೆ ಕಠಿಣ ಕ್ರಮ
-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ
ಹಾವೇರಿ:ಎ. 15 (ಕರ್ನಾಟಕ ವಾರ್ತೆ): ಲಾಕ್ಡೌನ್ ಅವಧಿ ಮಾರ್ಗಸೂಚಿ ಗಳನ್ನು ಎಪ್ರಿಲ್ 20ರವರೆಗೆ ಮುಂದುವರಿಸಲಾಗಿದೆ. ಹೊಸ ಮಾರ್ಗಸೂಚಿವರೆಗೆ ಸಾರ್ವಜನಿಕರು ಅನಗತ್ಯವಾಗಿ ಬೀದಿಯಲ್ಲಿ ಓಡಾಡುವುದನ್ನು ನಿಲ್ಲಿಸಿ ಮನೆಯಲ್ಲಿಯೇ ಉಳಿದು ಕರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಅನಗತ್ಯವಾಗಿ ಬೀದಿಯಲ್ಲಿ ಓಡಾಡುವೆ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವೈದ್ಯಕೀಯ ಕಾರಣ, ತುರ್ತು ಸಂದರ್ಭಗಳಲ್ಲಿ ವಿನಾಯಿತಿ ನೀಡಲಾಗುವುದು. ತರಕಾರಿ, ದಿನಸಿ, ಕೃಷಿ ಚಟುವಟಿಕೆಗೆ ಯಾವುದೇ ನಿರ್ಭಂಧ ಇರುವುದಿಲ್ಲ ಎಂದು ತಿಳಿಸಿದರು.
ದಿನಸಿ ಅಂಗಡಿಗಳ ತೆರೆಯಲು ಯಾವುದೇ ಸಮಯದ ನಿರ್ಭಂಧ ಇರುವುದಿಲ್ಲ. ಎಂದಿನಂತೆ ಅಂಗಡಿಗಳನ್ನು ತೆರೆದು ದಿನಸಿ ಮಾರಾಟಮಾಡಬಹುದು. ಆದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಈ ಕುರಿತಂತೆ ಎಲ್ಲ ಅಂಗಡಿ ಮಾಲೀಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ತರಕಾರಿ ಮಾರಾಟಕ್ಕೆ ತಳ್ಳುಗಾಡಿಗಳನ್ನು ವ್ಯವಸ್ಥೆ ಮಾಡಲಾದೆ. ದುಪ್ಪಟ್ಟು ದರಕ್ಕೆ ದಿನಸಿ, ತರಕಾರಿ ಮಾರಾಟ ಮಾಡಿದ ನಿರ್ಧಿಷ್ಟ ಪ್ರಕರಣಗಳು ಕಂಡುಬಂದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೊಂದಿಗೆ ಕ್ರಮಕೈಗೊಳ್ಳಲಾಗುವುದು. ಎಲ್.ಪಿ.ಜಿ. ವಿತರಣೆ, ಪಡಿತರ ವಿತರಣೆ ಹಾಗೂ ಬ್ಯಾಂಕ್ ವ್ಯವಹಾರಗಳಿಗೆ ಯಾವುದೇ ತೊಂದರೆ ಇಲ್ಲದೆ ವಿತರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಲಾಠಿ ಎತ್ತದಂತೆ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ತೆರಳುವವರಿಗೆ ವಿನಾಯಿತಿ ಸಹ ನೀಡಲಾಗಿದೆ. ಸಾರ್ವಜನಿಕರಿಗೆ ಕಿರುಕುಳ ನೀಡಿದರೆ ಕ್ರಮಕೈಗೊಳ್ಳುವುದಾಗಿ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಕಟ್ಟಪ್ಪಣೆ ಮಾಡಲಾಗಿದೆ. ಕೆಲ ಗ್ರಾಮಗಳಲ್ಲಿ ಕಾಲಕಾಲಕ್ಕೆ ಬದಲಾಗುವ ನಿಯಮಗಳನ್ನು ತಿಳಿಯದೇ ಗ್ರಾಮ ಮಟ್ಟದಲ್ಲಿ ತೊಂದರೆಯಾಗಿದ್ದರೆ ಇಂದಿನಿಂದಲೇ ಹೋಂ ಗಾರ್ಡ್ಗಳ ಜೊತೆಗೆ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬ್ತಸ್ಗೆ ನಿಯೋಜಿಸಲು ಆದೇಶ ಹೊರಡಿಸಲಾಗುವುದು. ಲಾಕ್ಡೌನ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ದೈನಂದಿನ ಬದುಕಿಗೆ ಕೆಲ ತೊಂದರೆಗಳು ಆಗಿರಬಹುದು. ಆದರೆ ಕರೋನಾದಂತಹ ಮಾರಕ ರೋಗ ಸಮೂಹಕ್ಕೆ ಹರವುಡುನ್ನು ತಪ್ಪಿಸಲು ಕೆಲಕಾಲ ನಿರ್ಭಂಧಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯ ಎಲ್ಲರೂ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.
ಜಿಲ್ಲೆಯಲ್ಲಿ 219 ಹೋಂ ಕ್ವಾರೆಂಟೈನ್ನಲ್ಲಿ ಇದ್ದಾರೆ. ಇವರ ಚಟುವಟಿಕೆ ಮೇಲೆ ನಿಗಾ ವಹಿಸಲು ಪೊಲೀಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ. ಮನೆಯಲ್ಲಿ ಇರುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಕಾಲಕಾಲಕ್ಕೆ ಮನೆಗೆ ಭೇಟಿ ನೀಡಿ ಹೋಂ ಕ್ವಾರೆಂಟೈನ್ ವ್ಯಕ್ತಿಗಳ ಫೋಟೋವನ್ನು ಪೊಲೀಸ್ ವಾಟ್ಸಾಪ್ ಗ್ರೂಪ್ಗೆ ಕಳುಹಿಸಲು ಪೊಲೀಸ್ರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಮಾರ್ಚ್ 23 ರಿಂದ ಲಾಕ್ಡೌನ್ ಆದ ಅವಧಿಯಿಂದ ಈವರೆಗೆ 5116 ವಾಹನಗಳಿಗೆ ದಂಡ ಹಾಲಾಗಿದೆ. 25.12 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 839 ವಾಹನಗಳನ್ನು ಸೀಜ್ ಮಾಡಲಾಗಿದೆ, 12 ಅಬಕಾರಿ ಪ್ರಕರಣಗಳನ್ನು ಪತ್ತೆಮಾಡಿ 5.50 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್ ಉಪಸ್ಥಿತರಿದ್ದರು
