ನವದೆಹಲಿ: ಕೇಂದ್ರ ಸಚಿವ ಸಂಪುಟದ ಪುನರಚನೆಗೆ ಕ್ಷಣಗಣನೆಗೆ ಆರಂಭವಾಗಿದ್ದು, ಅದಕ್ಕೂ ಮುನ್ನವೇ ಘಟಾನುಘಟಿ ಸಚಿವರುಗಳೇ ಸಂಪುಟದಿಂದ ಔಟ್ ಆಗಿದ್ದಾರೆ. ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಶಿಕ್ಷಣ ಸಚಿವ ರಮೇಶ್ ಫೋಖ್ರಿಯಾಲ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕರೊನಾ ಎರಡನೇ ತರಂಗವನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿರುವ ಬೆನ್ನಲ್ಲೇ ಇಬ್ಬರು ಆರೋಗ್ಯ ಮಂತ್ರಿಗಳ ರಾಜೀನಾಮೆ, ಅವರ ತಲೆದಂಡ ಎಂಬ ಮಾತುಗಳು ಕೇಳಿಬರುತ್ತಿವೆ. ಸಂಪುಟ ಪುನರಚನೆಯಲ್ಲಿ ನೂತನ ಆರೋಗ್ಯ ಸಚಿವರನ್ನು ನೇಮಕ ಮಾಡುವ ಮೂಲಕ ಕರೊನಾ ವೈರಸ್ನ ಮೂರನೇ ತರಂಗವನ್ನು ತಡೆಯುವುದು ಸರ್ಕಾರದ ಮುಂದಿನ ಆದ್ಯತೆಯಾಗಿದೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಕೂಡ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ. ಬಾಬುಲ್ ಸುಪ್ರಿಯೋ, ಸದಾನಂದ ಗೌಡ, ದೇಬಶ್ರೀ ಚೌಧುರಿ, ಸಂಜಯ್ ಧೋತ್ರೆ, ರತನ್ ಲಾಲ್ ಕಟಾರಿಯಾ, ರಾವ್ ಸಾಹೇಬ್ ಧನ್ವೆ ಪಾಟೀಲ್ ಮತ್ತು ಪ್ರತಾಪ್ ಚಂದ್ರ ಸಾರಂಗಿ ಸಚಿವ ಸ್ಥಾನವನ್ನು ಕಳೆದುಕೊಳ್ಳುವ ಸಾಲಿನಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಆಡಳಿತಾವಧಿಯಲ್ಲಿ ನಡೆಯುತ್ತಿರುವ ಮೆಗಾ ಸಂಪುಟ ಪುನರಚನೆ ಇದಾಗಿದೆ. ಈಗಾಗಲೇಮ ಜ್ಯೋತಿರಾಧಿತ್ಯ ಸಿಂಧಿಯಾ, ಸೊರಬನಾಂದ ಸೊನೊವಾಲ್, ನಾರಾಯಣ್ ರಾಣೆ ಮತ್ತು ಪಶುಪತಿ ನಾಥ್ ಪರಾಸ್ ಸೇರಿದಂತೆ ಅನೇಕರ ಹೆಸರು ಚಾಲ್ತಿಯಲ್ಲಿದೆ.
ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಠ ಪಂಗಡಗಳು (ಎಸ್ಟಿ) ಹಾಗೂ ಹೆಚ್ಚಿನ ಮಹಿಳಾ ಪ್ರತಿನಿಧಿಗಳೊಂದಿಗೆ ‘ಅತ್ಯಂತ ಯುವ’ ಸಂಪುಟ ಆಗಿರಲಿದೆ. ಇಂದು ಸಂಜೆ 6 ಗಂಟೆಗೆ ಹೊಸ ಸಂಪುಟ ಘೋಷಣೆ ಆಗಲಿದೆ.
ಪರಿಶಿಷ್ಟ ಜಾತಿ ಸಮುದಾಯಗಳ ದಾಖಲೆಯ ಪ್ರಾತಿನಿಧ್ಯಕ್ಕೂ ಸಂಪುಟ ಸಾಕ್ಷಿಯಾಗಲಿದೆ ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ ಸುಮಾರು 24 ಮಂತ್ರಿಗಳನ್ನು ಸೇರಿಸಿಕೊಳ್ಳಲಿದ್ದಾರೆ.
ರಾಜ್ಯದಲ್ಲಿ ಯಾರಿಗೆ ಸಿಗಲಿದೆ
ರಾಜ್ಯದ ಮೂವರು ಸಂಸದರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆಯಲ್ಲಿ ಮೂವರೂ ನಾಯಕರು ನವದೆಹಲಿಗೆ ತೆರಳಿದ್ದು, ನಿರೀಕ್ಷೆಗಳು ಹೆಚ್ಚಾಗಿವೆ. ಸದ್ಯ ರಾಜ್ಯದಿಂದ ಮೂವರು ಸಂಸದರಿಗೆ ದೆಹಲಿಯಿಂದ ದೂರವಾಣಿ ಕರೆ ಬಂದಿದೆ. ಚಿತ್ರದುರ್ಗ ಸಂಸದ ಆನೇಕಲ್ನ ನಾರಾಯಣಸ್ವಾಮಿ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಮತ್ತು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ವರಿಷ್ಠರ ಬುಲಾವ್ ಮೇರೆಗೆ ನವದೆಹಲಿಗೆ ತೆರಳಿದ್ದಾರೆ.