ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನ ಡಿವೈಡಂಡ್ ರೂಲ್ ಮಾಡುವ ಪ್ರಯತ್ನವನ್ನ ಸಂಸದೆ ಸುಮಲತಾ ಮಾಡ್ತಿದ್ದಾರೆ. ಇಂತಹ ನೀಚ ರಾಜಕಾರಣವನ್ನು ಈ ಹಿಂದೆ ಬ್ರಿಟಿಷರು ಮಾಡಿದ್ದರು. ಅದೇ ಕೆಲಸವನ್ನು ನೀವೀಗ ಮಾಡ್ತಿದ್ದೀರಾ. ಪ್ರಜ್ವಲ್ ರೇವಣ್ಣರನ್ನು ನೋಡಿ ಕಲಿಯಿರಿ ಎನ್ನುತ್ತೀರಲ್ಲಾ… ಪ್ರಜ್ವಲ್ ಕೂಡ ದೇವೇಗೌಡರ ಪ್ರಾಡಕ್ಟೆ ಎಂದು ಸುಮಲತಾ ವಿರುದ್ಧ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.
ಸುಮಲತಾ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಇದೀಗ ಎಚ್ಡಿಕೆ ಪರ ರವೀಂದ್ರ ಶ್ರೀಕಂಠಯ್ಯ ಬ್ಯಾಟಿಂಗ್ ಮಾಡಿದ್ದಾರೆ. ಮಂಡ್ಯ ಸಂಸದೆಯ ಹೇಳಿಕೆ ಖಂಡಿಸಿದ್ದಾರೆ. ನಮ್ಮ ಬಳಿ ಎಲ್ಲಾ ರೀತಿಯ ಮಿಸೈಲ್ಸ್ ಇವೆ. ಯಾರಿಗೆ ಯಾವ ಮಿಸೈಲ್, ನಿಮ್ಮ ಹೇಳಿಕೆಗಳಿಗೆ ಯಾವ ಮಿಸೈಲ್ ಬಿಡಬೇಕು ಎಂಬುದು ನಮಗೆ ಗೊತ್ತಿದೆ. ಜೆಡಿಎಸ್ ಪಕ್ಷದಲ್ಲಿ ಬೇಕಾದಷ್ಟು ಅಸ್ತ್ರಗಳಿವೆ. ನಮ್ಮ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಕನ್ನಡ ಭಾಷೆಯ ಪಕ್ಷ ಜನಾತದಳ. ನೀವು ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಿ ಆಂಧ್ರದಿಂದ ಹೊಸ ಪಕ್ಷ ತರುವ ಪ್ರಯತ್ನ ಮಾಡ್ತಿದ್ದೀರಾ? ಇದೆಲ್ಲಾ ಇಲ್ಲಿ ನಡೆಯಲ್ಲ ಎಂದು ಎಚ್ಚರಿಸಿದರು.
ರವೀಂದ್ರ ಶ್ರೀಕಂಠಯ್ಯ
ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ನಿಮ್ಮಂತಹ ಸಾವಿರಾರು ಜನರನ್ನ ಜೆಡಿಎಸ್ ತಯಾರು ಮಾಡಿ ರಾಜಕೀಯಕ್ಕೆ ಬಿಟ್ಟಿದೆ. ನಿಮ್ಮ ಪತಿಯನ್ನು ಸೇರಿದ ಹಾಗೇ ಸಾವಿರಾರು ಜನರನ್ನ ತಯಾರು ಮಾಡಿದೆ. ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದಿದ್ದೀರಾ. ನಿಮಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ. ನಮ್ಮ ನಾಯಕರ ಬಗ್ಗೆ ಮಾತನಾಡುವಾಗ ವಿವೇಕವಿರಲಿ. ನೀವಲ್ಲಾ ಮಂಡ್ಯ ಜನ, ನಾವು ಮೂಲ ಜನ. ಇಲ್ಲಿ ಹುಟ್ಟಿ ಬೆಳೆದಿರೋದು ನಾವು. ಮಂಡ್ಯ ಭಾಷೆ ಏನು? ಹೇಗೆ ಮಾತನಾಡಬೇಕು? ಎಂಬುದು ನಮಗೂ ಗೊತ್ತಿದೆ. ನಿಮಗೆ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಕುಮಾರಸ್ವಾಮಿಗೆ ತಲೆ ಕೆಟ್ಟಿದೆ ಎಂದ ನೀವು ಎಚ್ಡಿಕೆ ಬಳಿ ಕ್ಷಮೆ ಕೇಳಿ ಎಂದು ಆಗ್ರಹಿಸಿದರು. ಎರಡು ಬಾರಿ ಸಿಎಂ ಆದ ವ್ಯಕ್ತಿಗೆ ತಲೆಕೆಟ್ಟಿದೆ ಎಂದಿದ್ದೀರಲ್ಲಾ ಕೂಡಲೇ ಕ್ಷಮೆ ಕೇಳಬೇಕು ಎಂದರು.