ಬೆಂಗಳೂರು, ಮೇ 21- ಕೊರೋನಾ 2ನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ. ಮೊದಲನೆ ಅಲೆ ನಗರ ಪ್ರದೇಶದಲ್ಲಿ ಇತ್ತು. ಎರಡನೇ ಅಲೆ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ. ಸರ್ಕಾರದ ವೈಪಲ್ಯವೇ ಇದಕ್ಕೆ ಕಾರಣ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ರಾಜೀವ್ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಲೂ ಸರ್ಕಾರ ಎಚ್ಚೆತ್ತುಕೊಂಡು ಪರೀಕ್ಷೆಗಳನ್ನು ಸರಿಯಾಗಿ ಮಾಡುತ್ತಿಲ್ಲ, ವೈದ್ಯಕೀಯ ವ್ಯವಸ್ಥೆ ಸರಿ ಮಾಡಿಲ್ಲ. ಸುಳ್ಳು ಹೇಳುವುದೇ ಸರ್ಕಾರದ ಕೆಲಸವಾಗಿದೆ. ಸತ್ತವರ ಅಂಕಿ ಅಂಶಗಳನ್ನು ಮುಚ್ಚಿಡುತ್ತಿದ್ದಾರೆ. ಪರೀಕ್ಷೆ ಕಡಿಮೆ ಮಾಡಿ ಸೋಂಕು ಕಡಿಮೆಯಾಗುತ್ತಿದೆ ಎನ್ನುತ್ತಿದ್ದಾರೆ. ಇದು ಜನದ್ರೋಹಿ ಸರ್ಕಾರ ಎಂದು ಕಿಡಿಕಾರಿದರು.
ನಾವು ಚಾಮರಾಜನಗರಕ್ಕೆ ಹೊಗಿದ್ದೆವು, ಅಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತಿದ್ದಾರೆ, ಸರ್ಕಾರ ಮಾತ್ರ ಸತ್ತವರು ಮೂವರು ಎನ್ನುತ್ತಿದೆ. ನಾವು ಹೋಗದೆ ಇದ್ರೆ ಅದೇ ಸತ್ಯ ಅಂತ ವಾದಿಸುತ್ತಿದ್ದರು. ಜಿಲ್ಲಾಡಳಿತ ಕೂಡ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ ಎಂದು ಒಪ್ಪಿಕೊಂಡಿದೆ. ಇದಕ್ಕೆ ಯಾರು ಹೊಣೆ, ದುಷ್ಟ ಸರ್ಕಾರ ಇದು ಎಂದು ಕಿಡಿಕಾರಿದರು.
ಅಧಿಕಾರಿಗಳ ಜೊತೆ ಸಭೆ ನಡೆಸಿ ನಾನು ಮಾಹಿತಿ ಪಡೆಯಲು ಮುಂದಾದರೆ ಅದಕ್ಕೂ ಅಡ್ಡಿ ಪಡಿಸುತ್ತಿದ್ದಾರೆ. ಸತ್ಯ ಮುಚ್ಚಿಹಾಕಲು ಹೀಗೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸತ್ಯ ಹೇಳಿದ್ರೆ ಎಂಬ ಭಯ ಇವರಿಗೆ. ಸಾಮಾಜಿಕ ಜಾಲತಾಣದಲ್ಲಿ ನ ಉಗಿಯುತ್ತಿದ್ದಾರೆ. ಮಹಿಳೆಯರೂ ಅವ್ಯಾಚ್ಚ ಶಬ್ಧಗಳಿಂದ ನಿಂದಿಸ್ತಾರೆ ಎಂದು ಹೇಳಿದರು.
ಯಡಿಯೂರಪ್ಪನಂತ ಹೊಣೆಗೇಡಿ ಸಿಎಂ ಮತ್ತೊಬ್ಬರಿಲ್ಲ. ನಾನು 12 ಪತ್ರ ಬರೆದಿದ್ದೇನೆ. ಒಂದಕ್ಕೂ ಉತ್ತರ ನೀಡಿಲ್ಲ ಎಂದಾಗ ಮದ್ಯೆ ಪ್ರವೇಶ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಅಪ್ಪ ಹೇಗಿದ್ದಾನೋ ಮಗನೂ ಹಾಗೆಯೇ ಇದ್ದಾನೆ. ನಾನು ಬರೆದ ಪತ್ರಕ್ಕೆ ಮೋದಿ ಉತ್ತರ ಕೊಟ್ಟಿಲ್ಲ ಎಂದರು. ಕೇಂದ್ರದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಯತಾ ರಾಜಾ ತಥಾ ಪ್ರಾಜಾ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೊರೊನಾ ಸಂಕಷ್ಟ ಸಮಯದಲ್ಲಿ ಜನರಿಗಾಗಿ ಕೇರಳದಂತ ಸಣ್ಣ ರಾಜ್ಯ 20 ಸಾವಿರ ಕೋಟಿ ಇಟ್ಟಿದೆ. ನಮ್ಮಲ್ಲಿ ಹೆಸರಿಗೆ ಮಾತ್ರ ಪ್ಯಾಕೇಜ್ ಕೊಟ್ಟಿದ್ದಾರೆ, ಅದನ್ನು ಪ್ರಶ್ನೆ ಮಾಡಿದ್ರೆ ಬಂಧನ ಮಾಡ್ತಾರೆ. ಯಾರು ಹೆದರಬೇಡಿ, ಜೈಲಿಗೆ ಹಾಕಿದ್ರು ಪರವಾಗಿಲ್ಲ. ಅದೊಂದು ಆಂದೋಲನ ಮಾಡಿಯೇ ಬಿಡೋಣ. ಕರೋನಾ ಗೆ ಸರಿಯಾದ ವ್ಯವಸ್ಥೆ ಮಾಡುವುದಕ್ಕೆ ಇವರಿಂದ ಆಗಿಲ್ಲ. ಇದರ ಬಗ್ಗೆ ಮಾಹಿತಿ ಪಡೆಯೋಣ ಅಂದ್ರೆ ಅವಕಾಶ ಕೊಡ್ತಿಲ್ಲ. ಇಂತಹ ಪ್ರಜಾಪ್ರಭುತ್ವ ಕೊಲೆಗೇಡಿ ಸರ್ಕಾರ ನೋಡೇ ಇಲ್ಲ ಎಂದು ವಾಗ್ಧಾಳಿ ನಡೆಸಿದರು.
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜೀವ್ ಗಾಂಧಿ ಹಂತಕರನ್ನ ಬಿಡುಗಡೆ ಮಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ. ಶ್ರದ್ಧಾಂಜಲಿ ಸಂದರ್ಭದಲ್ಲೇ ಪತ್ರ ಬರೆದಿರುವುದು ನೋವಿನ ವಿಚಾರ. ಈ ಬಗ್ಗೆ ನಾನು ತಮಿಳುನಾಡು ಮುಖ್ಯಮಂತ್ರಿ ಹಾಗೂ ವಿಧಾನಸಭಾಧ್ಯಕ್ಷರ ಜೊತೆ ಜೊತೆ ಚರ್ಚೆ ನಡೆಸಿದ್ದೇನೆ. ಅವರು ಅಚಾತುರ್ಯವಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ವತಿಯಿಂದ 120 ಕ್ಷೇತ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆಗೆದಿದ್ದೇವೆ. 107 ಆಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಬೆಂಗಳೂರಿನಲ್ಲಿ 10 ಆಯಂಬುಲೆನ್ಸ್ ಬಿಟ್ಟಿದ್ದೇವೆ. ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ನಿಂದ ಕೋವಿಡ್ ಸೋಂಕಿತರಿಗೆ ನೆರವಾಗುವ ಕೆಲಸ ನಡೆಯುತ್ತಿದೆ ಎಂದರು.
ಜನರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುತ್ತಿದ್ದೇವೆ. ಬಡವರಿಗೆ ಉಚಿತ ಊಟದ ವ್ಯವಸ್ಥೆ ಮಾಡ್ತಿದ್ದೇವೆ. 90 ಶಾಸಕರು ಪ್ರಾದೇಶಾಭಿವೃದ್ಧಿ ನಿದಿ ಕೊಟ್ಟಿದ್ದೇವೆ. ನಾವು 10 ಕೋಟಿ ಸೇರಿಸಿ 100 ಕೋಟಿಯಲ್ಲಿ ಕೋವಿಡ್ ಲಸಿಕೆ ಖರೀದಿಗೆ ಕೊಡ್ತೇವೆ ಎಂದು ಹೇಳಿದರು.