ಚಿಕ್ಕಬಳ್ಳಾಪುರ: ಕೊರೊನಾ ಸೋಂಕಿನ ನೆಪದಲ್ಲಿ ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿವೆ ಎಂಬ ಆರೋಪಗಳ ಮಧ್ಯೆ ಹಿರಿಯ ಆರೋಗ್ಯಾಧಿಕಾರಿ ಹಣ ಹಾಗೂ ರೆಮ್ಡಿಸಿವಿರ್ ಔಷಧಿಗಳಿಗೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಮೇ 13 ಹಾಗೂ ಮೇ 14 ರಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರ ಚಿಕ್ಕಬಳ್ಳಾಪುರ ಜಿಲ್ಲೆಯ ಭೇಟಿಯ ಸಮಯದಲ್ಲಿ ಜೊತೆಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ಜಂಟಿ ನಿರ್ದೇಶಕ ಡಾ.ಮುರಳಿ ಕೃಷ್ಣ ಅವರು ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಬಲವಂತವಾಗಿ ಬೆದರಿಕೆ ಹಾಕಿ ಇಬ್ಬರ ಬಳಿಯೂ 5 ವಯಲ್ ರೆಮ್ಡಿಸಿವಿರ್ ಔಷಧಿ ಪಡೆದಿದ್ದಾರೆ.
ಈ ಸಂಬಂಧ ಬಾಗೇಪಲ್ಲಿ ಟಿಎಚ್ಓ ಡಾ.ಸತ್ಯನಾರಾಯಣ ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಮುರುಳಿ ಕೃಷ್ಣ ಶಿಡ್ಲಘಟ್ಟ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆರೋಪಿ ಡಾ.ಮುರಳಿಕೃಷ್ಣರಿಂದ ರೆಮ್ಡಿಸಿವಿರ್ ಔಷಧಿಗಳನ್ನ ವಶಪಡಿಸಿಕೊಳ್ಳಲಾಗಿದೆ.
ಕೊರೊನಾ ಸೋಂಕನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ದೂರ್ತರು ಜನರ ಜೊತೆಯಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟು, ಬೆಡ್, ವೆಂಟಿಲೇಟರ್, ಔಷಧಗಳನ್ನ ಬ್ಲಾಕ್ ನಲ್ಲಿ ಮಾರಾಟ ಮಾಡಿಕೊಂಡಿರುವ ಪ್ರಕರಣ ಜೀವಂತ ಇರುವಾಗಲೇ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ಕರ್ಮಕಾಂಡ ಬಯಲಾಗಿದೆ. ಇಲ್ಲಿ ಇವರೊಬ್ಬರೇ ಪಾಲುದಾರರಾ? ಅಥವಾ ಇನ್ನೂ ಇದ್ದಾರಾ ಎನ್ನುವ ಅನುಮಾನ ಬಲವಾಗಿದೆ. ತನಿಖೆಯ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ.