ಕೋಲಾರ; ಜಿಲ್ಲೆಯ ಕೆಜಿಎಫ್ನಲ್ಲಿ ಕೊರೋನಾ ವಾರಿಯರ್ಸ್ಗೆ ಉಚಿತ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಕೆಜಿಎಫ್ ನಗರದ ನಗರಸಭೆ ಕ್ರೀಡಾಂಗಣದಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ನೇತೃತ್ವದಲ್ಲಿ ಆಯೋಜಿಸಿದ್ದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ರಾಮಲಿಂಗಾರೆಡ್ಡಿ, ಕೆಎಚ್ ಮುನಿಯಪ್ಪ, ವಿಆರ್ ಸುದರ್ಶನ್, ವಲ್ಲಾಲ್ ಮುನಿಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಸಾವಿನ ವಿಚಾರವಾಗಿ ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಲೇ 36 ಜನ ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ವಿಚಾರವಾಗಿ ಸರ್ಕಾರ ಸತ್ಯ ಹೇಳಲಿಲ್ಲ. ಅಂತಹ ಮಾನಗೆಟ್ಟ ಜನರು ಇವರು. ರಾಜ್ಯಕ್ಕೆ ಬೇಕಿರುವಷ್ಟು ಆಕ್ಸಿಜನ್ ಕೇಂದ್ರದಿಂದ ಸಿಗುತ್ತಿಲ್ಲ. ಕಡಿಮೆ ಪ್ರಮಾಣದಲ್ಲಿ ಸರಬರಾಜು ಆಗುತ್ತಿದ್ದರೂ ಸರ್ಕಾರ ಸುಮ್ಮನಿದೆ. ರಾಜ್ಯದಲ್ಲಿ ಸರ್ಕಾರ ಸಂಪೂರ್ಣವಾಗಿ ಸತ್ತು ಹೋಗಿದೆ. ಸಿಎಂ ಯಡಿಯೂರಪ್ಪ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಬಹಳಷ್ಟು ಕಡೆ ಟೆಸ್ಟ್ ಕಡಿಮೆ ಮಾಡಿ, ಇದೀಗ ಸೋಂಕು ಇಳಿಕೆಯಾಗಿದೆ ಎನ್ನುತ್ತಿದ್ದಾರೆ. ಸುಳ್ಳೆ ಬಿಜೆಪಿ ಸರ್ಕಾರದ ಮನೆ ದೇವರು ಎಂದು ವ್ಯಂಗ್ಯವಾಡಿದರು. ಲಾಕ್ಡೌನ್ ಮಾಡಲಿ ಆದರೆ ವಿಶೇಷ ಪ್ಯಾಕೇಜ್ ಘೋಷಿಸಲಿ
ಇನ್ನು ರಾಜ್ಯ ಸರ್ಕಾರ ಲಾಕ್ಡೌನ್ ಬೇಕಾದರೆ ಮಾಡಲಿ. ಅದಕ್ಕೆ ನಾವು ಬೆಂಬಲ ನೀಡುತ್ತೇವೆ. ಆದರೆ ಸರ್ಕಾರ ಪ್ರತಿಯೊಬ್ಬರಿಗೂ 10 ಸಾವಿರ ಸಹಾಯಧನ ಕೊಡಲಿ. ಅದಕ್ಕಾಗಿ 20-30 ಸಾವಿರ ಕೋಟಿ ಖರ್ಚಾಗುತ್ತೆ. ಏನ್ ಇವರಪ್ಪನ ಮನೆಯ ಗಂಟಾ? ಯಡಿಯೂರಪ್ಪ ಅವರ ಮನೆಯಿಂದ ತಂದು ಕೊಡ್ತಾರಾ?. ಕೆರೆಯ ನೀರನ್ನು ಪುನಃ ಕೆರೆಗೆ ಚೆಲ್ಲಬೇಕು. ಎಷ್ಟು ಹೇಳಿದರು ಸರ್ಕಾರ ಕೇಳುತ್ತಿಲ್ಲ. ಬಿಜೆಪಿ ಸರ್ಕಾರದ್ದು ದಪ್ಪ ಚರ್ಮ, ಇಂತಹ ಜನರನ್ನು ನಾನು ನೋಡಿಲ್ಲ. ಪ್ರಪಂಚದಲ್ಲೇ ಇಂತಹವರು ಇರೊಲ್ಲ. ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಲಿ ಎಂದು ಆಗ್ರಹಿಸಿದರು.
ಕೋಲಾರದ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಆಯೋಜಿಸಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಮಾಲೂರು ನಗರದ ಕಾಂಗ್ರೆಸ್ ಕಚೇರಿ ಬಳಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ, ಕೆಎಚ್ ಮುನಿಯಪ್ಪ, ಶಾಸಕರಾದ ಶರತ್ ಬಚ್ಚೇಗೌಡ, ರಾಮಲಿಂಗಾರೆಡ್ಡಿ, ವಿಆರ್ ಸುದರ್ಶನ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು. ತಾಲೂಕಿನಾದ್ಯಂತ 35 ಸಾವಿರ ಜನರಿಗೆ ಆಹಾರ ಕಿಟ್ ವಿತರಣೆ ಮಾಡುವುದಾಗಿ ಶಾಸಕ ಕೆವೈ ನಂಜೇಗೌಡ ಕಾರ್ಯಕ್ರಮದಲ್ಲಿ ತಿಳಿಸಿದ್ದು, ಕಾರ್ಯಕ್ರಮದಲ್ಲಿ ಕೊರೋನಾ ವಾರಿಯರ್ಸ್ ಗೆ ಕಾಂಗ್ರೆಸ್ ನಾಯಕರು ಆಹಾರ ಕಿಟ್, ಹಾಗು ತರಕಾರಿ ವಿತರಣೆ ಮಾಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಕೊರೋನಾ ಸಂದರ್ಭವನ್ನು ನಿಭಾಯಿಸುವಲ್ಲಿ, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಯಡಿಯೂರಪ್ಪ ಒಬ್ಬ ಅಸಮರ್ಥ ಮುಖ್ಯಮಂತ್ರಿಯಾಗಿದ್ದಾರೆ ಎಂದರು. ಇವರನ್ನು ತೊಲಗಿ ಎಂದರು ಹೋಗುತ್ತಿಲ್ಲ. ಹೋದರೆ ನಾವಾದರೂ ಅಧಿಕಾರಕ್ಕೆ ಬಂದು ಒಳ್ಳೆಯ ಯೋಜನೆಗಳನ್ನು ಕೊಡುತ್ತೀವಿ, ಸುಮ್ಮನೆ ಗೂಟಾ ಹೊಡ್ಕೊಂಡು ಕೂತಿದ್ದಾರೆ. ಇವರನ್ನು ಬೇರು ಸಮೇತ ಕಿತ್ತು ಹಾಕಬೇಕೆಂದು ಕೈ ಕಾರ್ಯಕರ್ತರಿಗೆ ಕರೆ ನೀಡಿದರು.
ಇನ್ನು ಕೊರೋನಾ ಸಂಬಂಧ ಮೂರನೇ ಅಲೆ ಆರಂಭವಾಗುತ್ತಿದ್ದು, ರಾಜ್ಯ ಸರ್ಕಾರ ವಾಕ್ಸಿನ್ ನೀಡುವ ಮೂಲಕ, ವೈರಸ್ ಎದುರಿಸಬೇಕು. ಈ ಹಿಂದೆ ವ್ಯಾಕ್ಸಿನ್ ಬಗ್ಗೆ ತಪ್ಪು ಕಲ್ಪನೆ ಎದುರಾಗಿತ್ತು. ಆದರೆ ಈಗ ಜನ ತಪ್ಪದೇ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಸಾರ್ವಜನಿಕರಿಗೆ ಸಿದ್ದರಾಮಯ್ಯ ಅವರು ಕರೆ ನೀಡಿದರು.