ವಿಜಯಪುರ: ಹೆಮ್ಮಾರಿ ಕೊರೊನಾ ರಾಜ್ಯವನ್ನೇ ಹಿಂಡಿ ಹಿಪ್ಪೆ ಮಾಡುತ್ತಿರುವ ಬೆನ್ನಲ್ಲೆ ಮತ್ತೆ ರಾಜಕೀಯ ಗುದ್ದಾಟ ಶುರುವಾಗಿದೆ.
ವಿಜಯಪುರದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವೈಲೆಂಟ್ ಆಗಿದ್ದು, ಎಂದಿನಂತೆ ಸಿಎಂ ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ.
(ಸೋಮವಾರ) ಆರೋಗ್ಯ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾರ್ಯ ನಮಗೆ ತೃಪ್ತಿ ತಂದಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್, ಲಸಿಕೆ ಸಮಸ್ಯೆ ಕುರಿತು ರಾಜ್ಯದ ಪರ ಸಂಸದರು ಧ್ವನಿ ಎತ್ತದ ವಿಚಾರ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎಲ್ಲರನ್ನು ಕರೆದುಕೊಂಡು ಹೋಗಿ ಪ್ರಧಾನಿಗಳನ್ನು ಭೇಟಿ ಮಾಡಬೇಕಿತ್ತು. ನಮ್ಮ ಸಿಎಂ ಪಿಎಂರನ್ನ ಭೇಟಿನೇ ಮಾಡಿಲ್ಲ.ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಂಡಿದೆ. ಪ್ರಧಾನಿಗಳ ನಿರ್ದೇಶನದಂತೆ ಇಲ್ಲಿ ಕೆಲಸ ಆಗುತ್ತಿಲ್ಲ. ಎಷ್ಟು ಬಾರಿ ಯಡಿಯೂರಪ್ಪ ಪ್ರಧಾನಿ ಭೇಟಿ ಆಗಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಲಸಿಕೆ ಅಭಿಯಾನ ವಿಫಲವಾಗಿದ್ದಕ್ಕೆ ಬುದ್ದಿ ಜೀವಿಗಳು, ವಿಪಕ್ಷಗಳೇ ಕಾರಣ.ಅವರು ಇಲ್ಲ ಸಲ್ಲದ ಅಪ ಪ್ರಚಾರ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಜನರಿಗೆ ಅರಿವು ಮೂಡಿಸಬೇಕಿತ್ತು. ಆದರೆ, ಅದನ್ನು ಅವರು ಮಾಡಲಿಲ್ಲ. ಕೇವಲ ಪ್ರಚಾರಕ್ಕೆ ಸಿಎಂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿದರು. ಆದರೆ, ಅದನ್ನ ಸರಿಯಾಗಿ ವಿತರಣೆ ಮಾಡೋ ಕೆಲಸ ಮಾಡಿಲ್ಲ. ವಿಜಯಪುರ ಜಿಲ್ಲೆಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಬೇಕಿದೆ. ಇನ್ನು ಬೆಡ್ ಗಳು ಬೇಕಿದೆ. ವ್ಯಾಕ್ಸಿನೇಷನ್ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.