ಮೈಸೂರು(ಮಾ.25): ಕೋಟ್ಯಾಂತರ ರೂಪಾಯಿ ಲೂಟ್ ಆಗಿರುವ ಇಡಿ ಬಗ್ಗೆ ಚರ್ಚೆ ಮಾಡೋಲ್ಲ ಬರಿ ಸಿಡಿ ಚರ್ಚೆ ಮಾಡುತ್ತೀರಲ್ಲಾ, ಬಜೆಟ್ ಚರ್ಚೆಗಿಂತ ಸಿಡಿಯೇ ಹೆಚ್ಚಾಯ್ತಾ ನಿಮಗೆ ಅಂತ, ಸದನದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲಿಲ್ಲ ಎಂದು ವಿರೋಧ ಪಕ್ಷಗಳಿಗೆ ಪರಿಷತ್ ಸದಸ್ಯ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಚಾಟಿ ಬೀಸಿದ್ದಾರೆ. ನಿನ್ನೆ ಮುಗಿದ ಸದನ ಮುಗಿತು ಅಷ್ಟೆ, ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಬಜೆಟ್ ಅಧಿವೇಶ ಅಂದ್ರೆ ಆದಾಯ, ತೆರಿಗೆ, ಹಣಕಾಸಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದ್ರೆ ಅದ್ಯಾವುದೂ ಚರ್ಚೆ ಆಗಲೇ ಇಲ್ಲ. ಈ ಬಜೆಟ್ ಅಧಿವೇಶನ ಜನತಂತ್ರ ವ್ಯವಸ್ಥೆಯ ಅಣಕ ಎಂದು ಅಧಿವೇಶನದ ಬಗ್ಗೆ ಟೀಕಿಸಿದರು.
ಅಧಿವೇಶನದಲ್ಲಿ ಸೂಕ್ತ ವಿಷಯಗಳ ಚರ್ಚೆ ನಡೆಯದೆ ಇರೋದು. ಸರ್ಕಾರದಷ್ಟೇ ಅಲ್ಲ ವಿರೋಧ ಪಕ್ಷದ ತಪ್ಪು ಸಹ ಇದೆ. ಎಲ್ಲಿ ವಿರೋಧ ಪಕ್ಷ ಬಲಿಷ್ಠವಾಗಿರುತ್ತೆ ಅಲ್ಲಿ ಸರ್ಕಾರ ಚೆನ್ನಾಗಿರುತ್ತೆ. ಆದ್ರೆ ರಾಜ್ಯದಲ್ಲಿ ವಿರೋಧ ಪಕ್ಷಗಳು ಒಣಗೇಡಿತನ ಪ್ರದರ್ಶನ ಮಾಡಿವೆ, ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕಾರಣವೇ ಹೆಚ್ಚಾಯ್ತು. ರಾಜ್ಯ ನಾಲ್ಕು ಲಕ್ಷ ಕೋಟಿ ಸಾಲಕ್ಕೆ ಬಂದು ನಿಂತಿದೆ, 2.5 ಲಕ್ಷ ಕೋಟಿ ಬಜೆಟ್ ಅನ್ನು ಚರ್ಚೆಯೇ ಇಲ್ಲದೆ ಮುಗಿಸಿದ್ದಾರೆ ಎಂದು ವಿಪಕ್ಷಗಳ ವಿರುದ್ದವೇ ಕಿಡಿಕಾರಿದರು. Photo Gallery: ವಸಂತ ಕಾಲದಲ್ಲಿ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ ಸಿಲಿಕಾನ್ ಸಿಟಿ ಬೆಂಗಳೂರು..!
ಸದನದಲ್ಲಿ ಇಬ್ಬರು ಮಾಜಿ ಸಿಎಂಗಳಿದ್ದರೂ, ಇಬ್ಬರು ಮಾಜಿ ಸಿಎಂಗಳ ಜವಾಬ್ದಾರಿ ಏನು? ನಿಮಗೆ ಸಿಡಿಯೇ ದೊಡ್ಡದಾಯಿತಾ ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿರನ್ನ ಪ್ರಶ್ನಿಸಿದರು. ಆರೋಪ ಹೊತ್ತ ಮಂತ್ರಿಯೇ ರಾಜೀನಾಮೆ ನೀಡಿದ್ದಾರೆ. ಆ ಪ್ರಕರಣದಲ್ಲಿ ಇನ್ನೇನಿದೆ. 6 ಮಂತ್ರಿಗಳ ಮೇಲೆ ಚರ್ಚೆ, ಸುಧಾಕರ್ ಮೇಲೆ ಚರ್ಚೆ ಬೇಕಾಗಿತ್ತಾ ನಿಮಗೆ. ಬಜೆಟ್ ಅಧಿವೇಶದಲ್ಲಿ ಇದೇನಾ ಚರ್ಚೆನಾ ಮಾಡೋದು ನೀವು? ಬಜೆಟ್ ಬಗ್ಗೆ ನಮಗೆ ಜವಾಬ್ದಾರಿ ಇಲ್ಲವೇನೋ ಅನ್ನೋ ಥರ ನಡೆದುಕೊಂಡಿದ್ದೀರಿ. 30 ದಿನ ನಡೆಯಬೇಕಿದ್ದ ಸದನ 21 ದಿನಕ್ಕೆ ಮುಗಿಗಿದೆ. ಅದಾದರೂ ನೆಟ್ಟಗಾಯ್ತಾ. ಒಬ್ಬ ಮಾಜಿ ಸಿಎಂ ಸದನಕ್ಕೆ ಬಂದು ಸಮಯ ವ್ಯರ್ಥ ಮಾಡಿದ್ರು, ಇನ್ನೊಬ್ಬ ಮಾಜಿ ಸಿಎಂ ಸದನಕ್ಕೆ ಬಂದ್ರೆ ಉಪಯೋಗ ಇಲ್ಲ ಎಂದು ಹೇಳಿದ್ರು, ಇಂತವರೆಲ್ಲ ವಿರೋಧ ಪಕ್ಷದಲ್ಲಿದ್ದರೆ ಇನ್ನೇನಾಗುತ್ತೆ, ನೀವು ರಾಜಕಾರಣ ಮಾಡಿ ಬರೀ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ತೀರಾ? ಜನ ಎಲ್ಲವನ್ನು ನೋಡ್ತಿದ್ದಾರೆ ಅಂತ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ವಿರುದ್ದವೇ ಗುಡುಗಿದರು.
ಇನ್ನು ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರಕ್ಕೆ, ಅವರ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡಲ್ಲ. ಅವರು ನಿನ್ನೆಯೇ ಕ್ಷಮೆ ಕೇಳಿದ್ದಾರೆ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅದು ಮುಗಿದು ಹೋಗಿದೆ, ಅದರ ಬಗ್ಗೆ ಚರ್ಚೆ ಮಾಡಲ್ಲ. ಆದ್ರೆ ವಿರೋಧ ಪಕ್ಷಗಳು ಇದನ್ನ ಉಪಚುನಾವಣೆಗೆ ಬಳಸಿಕೊಳ್ತಿವೆ. ನಾವಿದ್ದಾಗ ಚಿನ್ನ ವಜ್ರ ಮಾರಾಟ ಮಾಡುವ ಸ್ಥಿತಿ ಇತ್ತು, ಈಗ ಎಲ್ಲವು ಹೋಗಿದೆ, ನಾವು ವಾಪಸ್ ಬರ್ತೀವಿ ಅಂತ ಮಾತನಾಡ್ತಿದ್ದಾರೆ. ಇದರಿಂದ ಪ್ರಯೋಜನ ಇಲ್ಲ ಆರ್ಥಿಕ ನೀತಿ ಬಗ್ಗೆ ಚರ್ಚೆ ಮಾಡದೆ ಸಿಡಿ ಬಗ್ಗೆ ಚರ್ಚೆ ಮಾಡಿದ್ದು ವ್ಯವಸ್ಥೆಯ ಅಣಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆ ಸಿಡಿಯನ್ನ ವಿಷ್ಣುಚಕ್ರ ಅಂದುಕೊಂಡಿದ್ದಾರಾ, ಸದನದಲ್ಲಿ ಆ ಸಿಡಿ ಹಿಡಿದುಕೊಂಡು ಪ್ರದರ್ಶನ ಮಾಡಿದ್ದಾರೆ. ಇದರಿಂದ ಏನು ಸಿಕ್ತು? ಮೈಸೂರಿನ ಅಪಘಾತದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಆದ್ರೆ ಅಂತಹ ವಿಚಾರ ಚರ್ಚೆ ಬಿಟ್ಟು ಸಿಡಿಯನ್ನ ವಿಷ್ಣುಚಕ್ರದಂತೆ ತಿರುಗುಸಿದ್ದಾರೆ ಅಂತ ಪ್ರತಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಈ ಬಾರಿಯ ಬಜೆಟ್ ಅಧಿವೇಶನ ಅರ್ಥಪೂರ್ಣವಾಗಿ ನಡೆಯಲಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.