ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ‘ಸಂತ್ರಸ್ತ’ ಯುವತಿ ಪರ ಮಹಿಳಾ ಕಾಂಗ್ರೆಸ್ ನಿಂತಿದೆ. ಒಬ್ಬ ರಾಜಕಾರಣಿಯಿಂದ ಆಕೆಗೆ ಅನ್ಯಾಯ ಆಗಿದ್ದರೂ ಸಂತ್ರಸ್ತೆಗೆ ಸರ್ಕಾರದಿಂದ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ. ಸರ್ಕಾರದ ಮೇಲೆ ಆಕೆಗೆ ನಂಬಿಕೆ ಇಲ್ಲ, ಹಾಗಾಗಿ ಕಾಂಗ್ರೆಸ್ ನಾಯಕರ ಬಳಿ ರಕ್ಷಣೆ ಕೋರಿದ್ದಾಳೆ. ಆ ಹೆಣ್ಣುಮಗಳ ರಕ್ಷಣೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ಶಾಸಕಿಯರು ಹೇಳಿದ್ದಾರೆ.
ಸಚಿವ ಡಾ.ಕೆ. ಸುಧಾಕರ್ ನೀಡಿದ್ದ ಏಕಪತ್ನಿವ್ರತಸ್ಥ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕಿಯರು, ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು. ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಮಾತನಾಡಿದ, ಹೆಣ್ಣುಮಗಳು ನೊಂದಿದ್ದರೆ ನ್ಯಾಯ ಕೊಡಿಸುತ್ತೇವೆ. ನಾವೆಲ್ಲರೂ ಅವರಿಗೆ ನ್ಯಾಯ ಕೊಡಿಸುತ್ತೇವೆ ಎಂದರು.
ಸಂತ್ರಸ್ತೆಯಿಂದ ಮತ್ತೊಂದು ವಿಡಿಯೋ ರಿಲೀಸ್ ಕುರಿತು ಮಾತನಾಡಿದ ಶಾಸಕಿ ರೂಪಾ ಶಶಿಧರ್, ಆತಂಕದಲ್ಲಿ ಆ ಹೆಣ್ಣುಮಗಳು ಇರಬಹುದು. ಸಿಎಂ ಮತ್ತು ಸರ್ಕಾರದ ಬಗ್ಗೆಯೂ ಆಕೆಗೆ ನಂಬಿಕೆಯಿಲ್ಲ. ಹಾಗಾಗಿ ಈ ರೀತಿಯಾಗಿ ಆತಂಕ ತೋಡಿಕೊಂಡಿರಬಹುದು. ಆ ತಾಯಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡ್ತೇವೆ. ಆ ಹೆಣ್ಣುಮಗಳಿಗೆ ಅನ್ಯಾಯವಾಗಿದೆ. ಹಾಗಾಗಿಯೇ ನಾವು ಸದನದಲ್ಲಿ ಹೋರಾಟ ಮಾಡಿದ್ದು ಎಂದರು.
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಆ ಹೆಣ್ಣುಮಗಳು ಎಲ್ಲಿದ್ದಾಳೆ ಅನ್ನುವುದು ಗೊತ್ತಿಲ್ಲ. ಅವರನ್ನ ಪತ್ತೆ ಮಾಡುವುದಕ್ಕೆ ಆಗಿಲ್ಲ. ಈ ಬಿಜೆಪಿ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ. ಕೆಲಸ ಕೊಡಿಸಿ ಎಂದು ಬಂದ ಮಹಿಳೆಗೆ ಸಚಿವರು ಹೀಗೆಲ್ಲ ಮಾಡೋದಾದರೆ ಬಿಜೆಪಿ ಮೇಲೆ ಹೇಗೆ ನಂಬಿಕೆ ಬರುತ್ತೆ? ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ಪ್ರತಿಭಟನೆಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ರಾಮನ ಪಕ್ಷದಲ್ಲಿ ಈ ರೀತಿ ಮಾತನಾಡಿದ್ದಕ್ಕೆ ಯಾರು ಅನುಮತಿ ಕೊಟ್ರು. ಶೋಭಾ ಕರಂದ್ಲಾಜೆ, ರೂಪಾಲಿ, ತೇಜಸ್ವಿನಿ ಇದನ್ನ ಒಪ್ಪಿಕೊಳ್ಳುತ್ತಾರಾ? ಡಾ.ಕೆ. ಸುಧಕಾರ್ ಬಳಿ ಏನಾದರೂ 224 ಶಾಸಕರ ಬಗ್ಗೆ ದಾಖಲೆ ಇದ್ರೆ ಕೋರ್ಟ್ ಮುಂದೆ ದಾಖಲಿಸಲಿ. ಪ್ರಧಾನಿ ಮತ್ತು ಗೃಹ ಸಚಿವರಿಗೆ ಈ ಮಾಹಿತಿ ಕಳಿಸುತ್ತೇವೆ. ಎಲ್ಲ ರಂಗದಲ್ಲೂ ಸಂಶಯವಾಗಿ ನೋಡುವ ಪ್ರವೃತ್ತಿ ಇವರ ಹೇಳಿಕೆಯಿಂದ ಶುರುವಾಗಿದೆ. ಪ್ರಮಾಣಿಕ ರಾಜಕಾರಣ ಮಾಡಿದವರು ಬಹಳ ಜನರು ಇದ್ದಾರೆ. ಇವರ ಹೇಳಿಕೆಯಿಂದ ಬಹಳ ಬೇಸರ ತರಿಸಿದೆ. ಇದು ಮಹಿಳಾ ಶಾಸಕಿಯರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.