ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಎಸ್ಐಟಿ ತಂಡ ಸದಾಶಿವನಗರ ಠಾಣೆಯಲ್ಲಿ ದಾಖಲಾದ ಎಫ್ಐಆರ್ ತಮ್ಮ ಸುಪರ್ದಿಗೆ ಪಡೆದಿದ್ದು ಕಾನೂನಾತ್ಮಕವಾಗಿ ತನಿಖೆ ಕೈಗೆತ್ತಿಕೊಂಡಿದೆ. ಇದೇ ವೇಳೆ ಸಂತ್ರಸ್ತೆ ಸೇರಿ ಮೂವರಿಗೆ ಎಸ್ಐಟಿ ನೋಟಿಸ್ ನೀಡಿ ವಿಚಾರಣೆಗೆ ಬುಲಾವ್ ನೀಡಿದ್ದಾರೆ. ಸಿಡಿ ಪ್ರಕರಣದ ಸಂಬಂಧ ನಿನ್ನೆ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದರು. ಇಂದು ರಮೇಶ್ ಜಾರಕಿಹೊಳಿ ಎಫ್ಐಆರ್ ಎಸ್ಐಟಿ ತನಿಖೆಗೆ ವರ್ಗಾವಣೆ ಮಾಡಲಾಗಿದೆ. ಎಫ್ಐಆರ್ ಆಧಾರದ ಮೇಲೆ ಎಸ್ಐಟಿ ತನಿಖೆ ಕೈಗೆತ್ತಿಕೊಂಡಿದ್ದು ಇದರಿಂದ ಕಾನೂನಾತ್ಮಕವಾಗಿ ಅನೆಬಲ ಸಿಕ್ಕಂತಾಗಿದೆ.
ಇನ್ನೂ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ಮೂವರಿಗೆ ನೋಟಿಸ್ ನೀಡಿದೆ. ಸಿಡಿಯಲ್ಲಿರುವ ಯುವತಿ ಹಾಗೂ ನಾಪತ್ತೆಯಾಗಿರುವ ಇಬ್ಬರು ಯುವಕರಿಗೆ ನೋಟಿಸ್ ನೀಡಲಾಗಿದೆ. ಸೋಮವಾರ ಬೆಳಗ್ಗೆ ಮೂವರು ಸಹ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ವಾಟ್ಸಪ್ ಮತ್ತು ಇಮೇಲ್ ಮೂಲಕ ನೋಟಿಸ್ ನೀಡಿರುವ ಎಸ್ಐಟಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣದ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚಿಸಿದೆ. ಇದಲ್ಲದೆ ಸಿಡಿಯಲ್ಲಿರುವ ಯುವತಿಯ ಮನೆ, ಪಿಜಿ ಹಾಗೂ ಸ್ನೇಹಿತರಿಗು ನೋಟಿಸ್ ನೀಡಲಾಗಿದೆ ಎನ್ನಲಾಗಿದ್ದು ಸೋಮವಾರ ಖುದ್ದು ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.
ಸಿಡಿ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಕಮೀಷನರ್ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಎಸ್ಐಟಿ ಮುಖ್ಯಸ್ಥ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗ ಡಿಸಿಪಿ ಅನುಚೇತ್, ಸಿಸಿಬಿ ಡಿಸಿಪಿ ರವಿಕುಮಾರ್, ಎಸಿಪಿ ಧರ್ಮೇಂದ್ರ ಹಾಗೂ ಇನ್ಸ್ಪೆಕ್ಟರ್ ಗಳು ಭಾಗಿಯಾಗಿದ್ದರು. ಸಭೆಯಲ್ಲಿ ರಮೇಶ್ ಜಾರಕಿಹೊಳಿ ಎಫ್ಐಆರ್ ಸಂಬಂಧ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಸಂತ್ರಸ್ತ ಯುವತಿ ವಿಡಿಯೋ ರಿಲೀಸ್ ಮಾಡಿದ್ದಾರೆ. ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ಕೆಲಸ ಕೊಡಿಸುವುದಾಗಿ ಹೇಳಿದ್ದರು ಎಂದು ಆರೋಪಿಸಿದ್ದು, ತನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಎಸ್ಐಟಿ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದ್ದು ಯುವತಿ ಹರಿಬಿಟ್ಟ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಎಸ್ಐಟಿಯ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಿದರು. ಹಾಗೂ ಎಫ್ಐಆರ್ ಅನ್ನ ಎಸ್ಐಟಿ ಪಡೆದುಕೊಂಡಿದ್ದು ಕಾನೂನಾತ್ಮಕ ತನಿಖೆ ಹೇಗೆ ಸಾಗಬೇಕು, ಸಾಕ್ಷ್ಯಾಧಾರಗಳ ಸಂಗ್ರಹದ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.
ಇನ್ನೂ ಸಿಡಿ ಕೇಸ್ ಸಂಬಂಧ ಎಸ್ಐಟಿ ಹಲವು ಅಂಶಗಳನ್ನ ಹೊರಗೆಡವಿದೆ. ತನಿಖೆ ವೇಳೆ ಮಾರ್ಚ್ 1ರಂದು ಐವರು ಯುವಕರು ಆರ್.ಟಿ. ನಗರದ ಅಜ್ಞಾತ ಸ್ಥಳವೊಂದರಲ್ಲಿ ಸಭೆ ನಡೆಸಿದ್ದರು. ಒಂದು ಗಂಟೆಗೂ ಅಧಿಕ ಕಾಲ ಆ ಸ್ಥಳದಲ್ಲಿ ಸೇರಿದ್ದ ಈ ಯುವಕರು ಸಿಡಿ ವಿಚಾರವನ್ನು ಚರ್ಚಿಸಿದ್ದರು. ಅದಾದ ಮರುದಿನ ಸಿಡಿ ಬಿಡುಗಡೆಯಾಗಿದೆ. ನಂತರ ಈ ಯುವಕರು ಪ್ರತ್ಯೇಕಗೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. : ಡಿ.ಕೆ ಶಿವಕುಮಾರ್ ಯಾಕಾಗಿ ತಾವಾಗಿಯೇ ಸಿಡಿ ಕೇಸ್ನಲ್ಲಿ ಸಿಲುಕುತ್ತಿದ್ದಾರೋ ಗೊತ್ತಿಲ್ಲ?; ಕುಮಾರಸ್ವಾಮಿ
ಈ ಯುವಕರು ಸಿಡಿ ಬಿಡುಗಡೆಗೆ ಮುನ್ನ ಸಭೆ ಸೇರಿದ್ದ ಬಗ್ಗೆ ಮೊಬೈಲ್ ಟವರ್ ಲೊಕೇಶನ್ ನಿಂದ ಪತ್ತೆ ಹಚ್ಚಿದ್ದಾರೆ. ಮಾರ್ಚ್ ಒಂದರಂದು ಈ ಐವರು ಯುವಕರು ಒಂದೇ ಟವರ್ ಲೊಕೇಶನ್ ಅಡಿಯಲ್ಲಿ ಇದ್ದದ್ದು ಎಸ್ಐಟಿ ತನಿಖೆಯಿಂದ ಗೊತ್ತಾಗಿದೆ.
ಒಟ್ನಲ್ಲಿ ರಮೇಶ್ ಜಾರಕಿಹೊಳಿ ಪದಚ್ಯುತಿಗೆ ಕಾರಣವಾದ ಸಿಡಿ ಕೇಸ್ ತನಿಖೆ ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ತಿದೆ. ಎಸ್ಐಟಿ ತನಿಖೆಯಲ್ಲಿ ಪತ್ತೆಯಾದ ವ್ಯಕ್ತಿಗಳಿಗೆ ನೋಟಿಸ್ ನೀಡಿ ಒಬ್ಬೊಬ್ಬರನ್ನೆ ವಿಚಾರಣೆಗೆ ಒಳಪಡಿಸಲಾಗಿದ್ದು ಇದು ಮುಂದೆ ಯಾವ ಹಂತಕ್ಕೆ ತಲುಪುತ್ತೋ ಕಾದು ನೋಡಬೇಕಿದೆ.