ವಿಜಯಪುರ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಎಸ್ ಐ ಟಿ ತನಿಖೆ ನಡೆಸುತ್ತಿದೆ. ತನಿಖೆಯ ಬಳಿಕ ಸತ್ಯಾಂಶ ಬಯಲಾಗಲಿದೆ. ಹೀಗಾಗಿ ಸಿಬಿಐ ತನಿಖೆಗೆ ಆಗ್ರಹಿಸುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ.
ಮೌಢ್ಯ ನಿವಾರಣೆಗಾಗಿ ಜಿಲ್ಲೆಯ ಜುಮನಾಳ ಗ್ರಾಮದಲ್ಲಿ ಭಾನುವಾರ ಸ್ಮಶಾನ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದರಿ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕೈವಾಡ ಕೇಳಿಬರುತ್ತಿದೆ, ಅವರನ್ನು ಗುರಿಯಾಗಿಸುವ ಅಥವಾ ಯಾರ ಮೇಲೆ ಯಾರೂ ದ್ವೇಷ ಸಾಧಿಸುವ ಅಗತ್ಯವಿಲ್ಲ ಎಂದರು.
ಇಂಥ ಕೃತ್ಯಗಳು ನಡೆಯಬಾರದು ಎಂದು ಇಡೀ ಸಮಾಜ ಬಯಸುತ್ತದೆ. ಎಸ್ ಐ ಟಿ ತನಿಖೆಯಿಂದ ಸತ್ಯ ಬಯಲಾಗಲಿದೆ. ಸದರಿ ಪ್ರಕರಣದಲ್ಲಿ ತಕ್ಷಣ ಏನನ್ನೂ ಹೇಳಲಾಗದು. ಹೀಗಾಗಿ ತನಿಖೆ ಅಂತ್ಯವಾಗುವ ವರೆಗೆ ಕಾಯಬೇಕು. ಸತ್ಯ ಎಂದಿದ್ದರೂ ಹೊರಬರಲೇ ಬೇಕು. ಆದ್ದರಿಂದ ಶಾಸಕ ಯತ್ನಾಳ ಆಗ್ರಹದಂತೆ ಸಿಬಿಐ ತನಿಖೆ ಅಗತ್ಯವಿಲ್ಲ, ರಾಜ್ಯದ ಪೊಲೀಸರೇ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿದರು.