ಬೆಂಗಳೂರು : ಒಂದು ದೇಶ, ಒಂದೇ ಚುನಾವಣೆ ಚರ್ಚೆ ಸಂಬಂಧ ಶರ್ಚ್ ಬಿಚ್ಚಿ ಸದನದಲ್ಲಿ ಪ್ರತಿಭಟನೆ ನಡೆಸಿದಂತ ಭದ್ರಾವತಿಯ ಶಾಸಕ ಸಂಗಮೇಶ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಒಂದು ವಾರ ಸದನದಿಂದ ಅಮಾನತುಗೊಳಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಷಣ ಮುಗಿಸಿ ಸದಸ್ಯರೆಲ್ಲರೂ ತಮ್ಮ ತಮ್ಮ ಆಸನಗಳಿಗೆ ಹಿಂತಿರುಗಬೇಕೆಂದು ಮನವಿ ಮಾಡಿದರು. ಆಗ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್, ಒಂದು ದೇಶ, ಒಂದೇ ಚುನಾವಣೆ ಮೇಲಿನ ಚರ್ಚೆಗೆ ವಿರೋಧ ವ್ಯಕ್ತ ಪಡಿಸಿ, ಮೊದಲು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು.
ತಮ್ಮ ಶರ್ಟ್ ಕಳಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಅವರನ್ನು ಕಂಡಂತ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅವರ ವಿರುದ್ಧ ಕೆರಳಿ ಕೆಂಡವಾಗಿದ್ದರು. ಜೊತೆಗೆ 50 ವರ್ಷ ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷದ ಸದಸ್ಯರು ನಡೆದುಕೊಳ್ಳುವ ರೀತಿ ಇದೇನಾ ? ನಿಮ್ಮ ಅಭಿಪ್ರಾಯಗಳು ಏನೇ ಇರಲಿ ಮೊದಲು ನಿಮ್ಮ ನಿಮ್ಮ ಸ್ಥಾನಗಳಿಗೆ ಮರಳಿ, ವ್ಯಕ್ತ ಪಡಿಸುವಂತೆಯೂ ಸೂಚಿಸಿದ್ದರು.
ಈ ವಿಷಯದ ಮೇಲೆ ಇಂತಿಂತವರೇ ಚರ್ಚೆ ಮಾಡುತ್ತೇವೆ ಎಂದು ಹೆಸರುಗಳನ್ನೂ ಕೊಟ್ಟಿದ್ದೀರಿ ಇಂದು ಬೆಳಗ್ಗೆಯಿಂದ ನಿಮ್ಮ ನಿಲುವು ಬದಲಾದರೆ ನಾನೇನು ಮಾಡಲಿ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರು ತಮ್ಮ ಶರ್ಟ್ ಕಳಚಿ ತೋಳನ್ನು ಮೇಲೆತ್ತಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಇದರಿಂದ ಮತ್ತಷ್ಟು ಕೆರಳಿದ ಕಾಗೇರಿ ಅವರು, ಒಬ್ಬ ಹಿರಿಯ ಸದಸ್ಯರಾಗಿ ನಡೆದುಕೊಳ್ಳುವುದು ಹೀಗೆನಾ? ಎಂದು ಪ್ರಶ್ನಿಸಿದ್ದಲ್ಲದೇ ನಿಮ್ಮ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಶಾಸಕ ಬಿಕೆ ಸಂಗಮೇಶ್ ಅವರ ಬಳಿಗೆ ಬಂದಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರರು, ಸಂಗಮೇಶ್ ಅವರಿಗೆ ಶರ್ಟ್ ಹಾಕಿಸಿದರು. ಒಂದು ದೇಶ, ಒಂದೇ ಚುನಾವಣೆ ಮೇಲಿನ ಚರ್ಚೆಗೆ ತೀವ್ರ ವಿರೋಧ ಪಕ್ಷಗಳ ಗದ್ದಲ ಕೋಲಾಹಲದಿಂದಾಗಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಸದನವನ್ನು 15 ನಿಮಿಷಗಳ ಕಾಲ ಮುಂದೂಡಿಕೆ ಮಾಡಿದ್ದರು.
ಈ ಘಟನೆಯಿಂದಾಗಿ ಗರಂ ಆಗಿದ್ದಂತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅವರು, ಸಂಗಮೇಶ್ ಅಶಿಸ್ತಿನಿಂದ ನಡೆದುಕೊಂಡಿದ್ದಾರೆ. ಅವರ ನಡೆಯನ್ನು ಸದನ ಒಪ್ಪುವುದಿಲ್ಲ ಎಂಬುದಾಗಿ ಕಿಡಿಕಾರಿದ್ದ ಅವರು, ಅವರ ಅಮಾನತಿಗೆ ನಿರ್ಧಾರ ಕೈಗೊಂಡಿದ್ದರು. ಇಂತಹ ನಿರ್ಧಾರಕ್ಕೆ ಆಡಳಿತ ಪಕ್ಷ ಒಪ್ಪಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಸದನದಿಂದ ಒಂದುವಾರಗಳ ಕಾಲ ಅಮಾನತುಗೊಳಿಸಿದ್ದಾರೆ.