ಬೆಂಗಳೂರು(ಮಾ. 04): ಈಗ ಒನ್ ನೇಷನ್ ಒನ್ ಎಲೆಕ್ಷನ್ ಅಂತಿದ್ದಾರೆ. ಇದನ್ನ ಯಾರ ಒತ್ತಡದ ಮೇಲೆ ತಂದಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯ ನಂತರ ಮಾತನಾಡಿ, ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ಚರ್ಚೆಯಿದೆ. ಇದನ್ನ ಚರ್ಚೆಗೆ ಯಾರು ಅವಕಾಶ ಕೊಟ್ಟಿದ್ದು? ಕೇಂದ್ರ ಸರ್ಕಾರವೇನಾದ್ರೂ ಇದನ್ನ ಮಾಡಿ ಎಂದಿದ್ಯಾ? ಇವತ್ತು ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಇವುಗಳ ಬಗ್ಗೆ ಯಾಕೆ ಚರ್ಚೆ ಮಾಡಬಾರದಾ? ಎಂದು ಪ್ರಶ್ನಿಸಿದರು.
ದುಡ್ಡು ಕೊಟ್ಟು ಎಂಎಲ್ಎ ಖರೀದಿ ಮಾಡಿದ್ದಾರೆ. ಇವರಿಗೆ ಇನ್ಯಾವ ಮೌಲ್ಯವಿದೆ? ಇದರ ಬಗ್ಗೆ ಸಿಎಲ್ಪಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಒಂದು ರಾಷ್ಟ್ರ ಒಂದು ಚುನಾವಣೆ ಮೇಲಿನ ಚರ್ಚೆಯ ಪ್ರಸ್ತಾಪವನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಸ್ಪೀಕರ್ ನಡೆಗೆ ಬೇಸರ ವ್ಯಕ್ತಪಡಿಸಿದರು. ಬಿಜೆಪಿಯವರು ತಮ್ಮ ಪಕ್ಷದ ಪೊಲಿಟಿಕಲ್ ಅಜೆಂಡಾ ಹೇರಲು ಮುಂದಾಗಿದ್ದಾರೆ. ಎಲ್ಲಾ ದುಡ್ಡುಕೊಟ್ಟು ಖರೀದಿ ಮಾಡಿ ಏನು ಮೌಲ್ಯ ಉಳಿಸಿದ್ದಾರೆ? ಒನ್ ನೇಷನ್ ಒನ್ ಎಲಕ್ಷನ್ ಚರ್ಚೆಯನ್ನ ವಿರೋಧಿಸಲು ಸಿಎಲ್ಪಿ ಯಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು.