ಖಾನಾಪುರ: ೨೦೧೯ರ ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಯಿಂದ ಮಲಪ್ರಭಾ ನದಿಗೆ ಉಂಟಾದ ಪ್ರವಾಹದಲ್ಲಿ ತಮ್ಮ ಮನೆ ಮತ್ತು ಆಸ್ತಿ-ಪಾಸ್ತಿ ಕಳೆದುಕೊಂಡಿರುವ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮದ ೭೦ಕ್ಕೂ ಹೆಚ್ಚು ನೆರೆ ಸಂತ್ರಸ್ತರು ಗುರುವಾರ ತಮಗೆ ನಿವೇಶನ, ತಾತ್ಕಾಲಿಕ ವಸತಿ ವ್ಯವಸ್ಥೆ ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ನೀಡದ ತಹಸೀಲ್ದಾರ್ ಕ್ರಮವನ್ನು ಖಂಡಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.
ಪ್ರತಿಭಟನೆಯ ಅಂಗವಾಗಿ ಪ್ರವಾಹ ಸಂತ್ರಸ್ತರು ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಒಲೆ ಹೂಡುವ ಮೂಲಕ ಅಡುಗೆಯನ್ನು ತಯಾರಿಸಿ ಊಟ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು, “ತಮ್ಮೂರಲ್ಲಿ ಪ್ರವಾಹ ಸಂಭವಿಸಿ ಒಂದೂವರೆ ವರ್ಷ ಗತಿಸಿದೆ. ಪ್ರವಾಹದ ನಂತರ ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವಿವಿಧ ಮುಖಂಡರು ತಮ್ಮೂರಿಗೆ ಆಗಮಿಸಿ ತಮ್ಮ ಸಮಸ್ಯೆಯನ್ನು ವೀಕ್ಷಿಸಿದ್ದಾರೆ. ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳು ಅವರು ಕೂಡಲೇ ತಮಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡುವಂತೆ ತಹಸೀಲ್ದಾರರಿಗೆ ಸೂಚಿಸಿದ್ದಾರೆ. ಆದರೆ ತಹಸೀಲ್ದಾರರು ಇಲ್ಲಿಯವರೆಗೂ ಇತ್ತ ಗಮನಹರಿಸಿಲ್ಲ. ಹೀಗಾಗಿ ತಮಗೆ ಸೂರು ಸಿಗುವವರೆಗೂ ತಹಸೀಲ್ದಾರ್ ಕಚೇರಿಯ ಎದುರಲ್ಲೇ ಪ್ರತಿಭಟನೆಯನ್ನು ನಡೆಸುವುದಾಗಿ” ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜು ನಾಯ್ಕ, ಅಶೋಕ ಯಮಕನಮರಡಿ, ರಾಘವೇಂದ್ರ ನಾಯ್ಕ, ಗುರುಲಿಂಗಯ್ಯ ಹಿರೇಮಠ, ಜಯಶ್ರೀ ಗೂರನವರ ಸೇರಿದಂತೆ ರೈತ ಮುಖಂಡರು ಮತ್ತು ಹಿರೇಹಟ್ಟಿಹೊಳಿ ಗ್ರಾಮಸ್ಥರು ಇದ್ದರು.