ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದ 18 ಜನರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಒದಗಿಸಿದ್ದಾರೆ.
ಗ್ರಾಮೀಣ ಕ್ಷೇತ್ರದಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವ ಕೆಲವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು. ಆಸ್ಪತ್ರೆಯ ವೆಚ್ಛವನ್ನು ಭರಿಸುವ ಸಾಮರ್ಥ್ಯವಿರಲಿಲ್ಲ. ಹಾಗಾಗಿ ಅವರಿಗೆಲ್ಲ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಿಸಿ, ಅವರವರ ಬ್ಯಾಂಕಿನ ಖಾತೆಗಳಿಗೆ ಹಣ ಜಮಾ ಮಾಡಿಸಲಾಗಿದೆ.
ಈ ಕುರಿತ ದಾಖಲೆಗಳನ್ನು ಗುರುವಾರ ಬೆಳಗ್ಗೆ ಲಕ್ಷ್ಮಿ ಹೆಬ್ಬಾಳಕರ್ ಸಂಬಂಧಿಸಿದವರಿಗೆ ನೀಡಿದರು.
ಆರೋಗ್ಯವೇ ಭಾಗ್ಯ ಎನ್ನುವಂತೆ ಎಲ್ಲರೂ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಂದಿನ ದುಭಾರಿ ದಿನಗಳಲ್ಲಿ ಸಣ್ಣ ಪುಟ್ಟ ಖಾಯಿಲೆಗಳಿಗೂ ವೆಚ್ಚ ಭರಿಸುವ ಶಕ್ತಿ ಬಡಜನರಿಗೆ ಇರುವುದಿಲ್ಲ. ದುಡಿದ ದುಡ್ಡನ್ನು ಆಸ್ಪತ್ರೆಗೆ ಭರಿಸಬೇಕಾದ ಸಂದರ್ಭ ಬಂದರೆ ಊಟಕ್ಕೆ ಏನು ಎನ್ನುವ ಪ್ರಶ್ನೆ ಏಳುತ್ತದೆ. ಹಾಗಾಗಿ ಕುಟುಂಬದ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆದರೆ ಯಾರೂ ಧೃತಿಗೆಡಬೇಕಾಗಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಅನಾರೋಗ್ಯಪೀಡಿತರಾದವರಿಗೆ ನನ್ನಿಂದ ಸಾಧ್ಯವಾದಷ್ಟರಮಟ್ಟಿಗೆ ನೆರವನ್ನು ಒದಗಿಸುತ್ತಿದ್ದೇನೆ ಎಂದು ಹೆಬ್ಬಾಳಕರ್ ತಿಳಿಸಿದರು.