ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ, ಒಂದು ಕಿಲೋಮೀಟರ್ ಗೆ ಲಾರಿ ಓಡಿಸಲು ಮಾಲೀಕರಿಗೆ 36 ರೂ. ವೆಚ್ಚವಾಗುತ್ತಿದೆ. ರಾಜ್ಯದಿಂದ 40 ಸಾವಿರ ಲಾರಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಹೊರ ರಾಜ್ಯದಲ್ಲಿ ಡಿಸೇಲ್ ಕಡಿಮೆ ಇದೆ. ಕಡಿಮೆ ಇರುವ ರಾಜ್ಯಗಳಿಂದ ಮಾಲೀಕರು ಡಿಸೇಲ್ ಹಾಕಿಸಿಕೊಂಡು ಬರುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ಹಿನ್ನಲೆ ಪ್ರತಿ ಲೀಟರ್ ಡಿಸೇಲ್ ಗೆ 3 ರೂ ಸೆಸ್ ಕಡಿಮೆ ಮಾಡುವಂತೆ ಸರ್ಕಾರಕ್ಕೆ ಅವರು ಮನವಿ ಮಾಡಿದರು.
ಅಷ್ಟೇ ಅಲ್ಲದೇ ,ಟೋಲ್, ವಿಮೆ ಹೆಚ್ಚಳದಿಂದ ಟ್ರಕ್ಕಿಂಗ್ ಉದ್ಯಮದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ಕ್ರಾಪಿಂಗ್ ನೀತಿ, ಇ-ವೇ ಬಿಲ್, ಹಸಿರು ತೆರಿಗೆ ಹೆಚ್ಚಳ, ಬಿಎಸ್6 ವಾಹನಗಳ ವೆಚ್ಚ, ವಾಹನಗಳ ಬಿಡಿಭಾಗಗಳ ದರ ಹೆಚ್ಚಳದಿಂದ ಸಮಸ್ಯೆಯಾಗಿದೆ. ಈ ಹಿನ್ನಲೆ ಒಂದು ದಿನ ಸಾಕೇಂತಿಕ ಮುಷ್ಕರ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ. ಈ ಬಗ್ಗೆ ಕೂಡಲೇ ಸರ್ಕಾರ ಮಾತುಕತೆಗೆ ಕರೆಯಬೇಕು. ಸರ್ಕಾರ ಮಾತುಕತೆ ನಡೆಸಲಿಲ್ಲ ಎಂದರೆ ಮಾರ್ಚ್ 15 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.