ಆನೇಕಲ್: ಅವರು ಕಾನನ ನಡುವೆ ವನ್ಯಜೀವಿಗಳನ್ನು ಕಂಡು ಖುಷಿಪಡಲು ಅಲ್ಲಿಗೆ ತೆರಳಿದ್ದರು. ಆನೆ, ಜಿಂಕೆ, ಕಾಡೆಮ್ಮೆ, ಕರಡಿ ಸಿಂಹ ಸೇರಿದಂತೆ ಅಪರೂಪದ ವನ್ಯಜೀವಿಗಳನ್ನು ಕಣ್ತುಂಬಿಕೊಂಡು ಮುಂದೆ ಸಾಗಿದ್ದರು. ಅಷ್ಟರಲ್ಲಿ ಎದುರಾಯ್ತು ನೋಡಿ ವ್ಯಾಘ್ರ ಹುಲಿ. ಎಂತಹವರನ್ನು ಒಂದು ಕ್ಷಣ ತನ್ನತ್ತ ಸೆಳೆಯುವ ವನ್ಯಜೀವಿ. ಹಾಗಾಗಿ ಹುಲಿಯನ್ನು ಸಮೀಪದಿಂದ ನೋಡಲು ಅವರು ವಾಹನ ನಿಲ್ಲಿಸಿದ್ದಾರೆ. ಬಳಿಕ ಚಾಲಕ ಎಷ್ಟೇ ಪ್ರಯತ್ನಪಟ್ಟರು ವಾಹನ ಸ್ಟಾರ್ಟ್ ಆಗಲಿಲ್ಲ. ಇದನ್ನು ಕಂಡು ವ್ಯಾಘ್ರಗೊಂಡ ಹುಲಿರಾಯ ವಾಹನದ ಮೇಲೆ ದಾಳಿ ಮಾಡಿದ್ದಾನೆ. ವ್ಯಾಘ್ರ ಹುಲಿರಾಯ ಮಹೇಂದ್ರ ಜೈಲೋ ವಾಹನದ ಹಿಂಬದಿ ಬಂಪರ್ ಅನ್ನು ಕಚ್ಚಿ ಹಿಂದಕ್ಕೆ ಎಳೆದಿದೆ. ಇದರಿಂದ ವಾಹನದಲ್ಲಿದ್ದ ಪ್ರಯಾಣಿಕರು ಜೀವ ಕೈಗೆ ಬಂದಂತಾಗಿದೆ. ಈ ಘಟನೆ ನಡೆದಿರುವುದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿಯಲ್ಲಿ.
ಹೌದು, ಕಳೆದ ವರ್ಷ ನವೆಂಬರ್ ತಿಂಗಳ ಎರಡನೇ ವಾರದಲ್ಲಿ ನಡೆದಿರುವ ಘಟನೆ ಇದಾಗಿದೆ . ಅಂದು ಮೂರು ಮಂದಿ ವಿಐಪಿ ಪ್ರವಾಸಿಗರನ್ನು ಮಹೇಂದ್ರಾ ಜೈಲೋ ವಾಹನದಲ್ಲಿ ಸಫಾರಿ ವೀಕ್ಷಣೆಗೆ ಕರೆದೊಯ್ಯಲಾಗಿತ್ತು. ಆನೆ, ಸಿಂಹ, ಕರಡಿ, ಜಿಂಕೆ ಸಫಾರಿ ವೀಕ್ಷಣೆ ಬಳಿಕ ಹುಲಿ ಸಫಾರಿಗೆ ಹೊರಟಿದ್ದಾರೆ. ಇನ್ನೂ ಹುಲಿ ಸಫಾರಿ ಪ್ರದೇಶಕ್ಕೆ ಎಂಟ್ರಿ ಕೊಟ್ಟ ತಕ್ಷಣ ರಸ್ತೆ ಪಕ್ಕದಲ್ಲಿಯೇ ಬಿಂದಾಸ್ ಆಗಿ ಬೆಂಗಾಲ್ ಟೈಗರ್ ಪೋಸ್ ಕೊಟ್ಟಿದ್ದಾನೆ. ಪ್ರವಾಸಿಗರು ಚಾಲಕನಿಗೆ ಹುಲಿ ಸಮೀಪವೇ ಕಾರು ನಿಲ್ಲಿಸುವಂತೆ ತಿಳಿಸಿದ್ದಾರೆ. ಅದರಂತೆ ಚಾಲಕ ಹುಲಿ ಪಕ್ಕವೇ ಕಾರು ನಿಲ್ಲಿಸಿದ್ದಾರೆ. ಸಮೀಪದಿಂದ ಹುಲಿಯನ್ನು ಕಂಡು ರೋಮಾಂಚನಗೊಂಡ ಪ್ರವಾಸಿಗರು ಮುಂದಕ್ಕೆ ಚಲಿಸುವಂತೆ ಚಾಲಕನಿಗೆ ತಿಳಿಸಿದ್ದಾರೆ. ಆದರೆ ಈ ವೇಳೆ ಬ್ಯಾಟರಿ ಕೈ ಕೊಟ್ಟಿದ್ದರಿಂದ ವಾಹನ ಸ್ಟಾರ್ಟ್ ಆಗಲಿಲ್ಲ. ಏನಾಗಿದೆ ಎಂದು ಕಾರಿನಿಂದ ಕೆಳಗೆ ಇಳಿದು ನೋಡಲು ವ್ಯಾಘ್ರನ ಭಯ. ಬಳಿಕ ಬೇರೊಂದು ವಾಹನ ತರುವಂತೆ ಹೇಳಿ ಕಾರಿನಲ್ಲಿಯೇ ಮೌನವಾಗಿ ಕುಳಿತುಕೊಂಡಿದ್ದಾರೆ.