ಬೆಂಗಳೂರು,ಜ.16- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪಕ್ಷದಲ್ಲಿ ಆಂತರಿಕ ಕಲಹ, ಅಸಮಾಧಾನಿತರ ಆಕ್ರೋಶ ಹೊಗೆಯಾಡುತ್ತಲೇ ಬಂದಿದೆ. ಪುಗಾರಿಕೆ, ಮೂಲ, ವಲಸಿಗರ ತಿಕ್ಕಾಟ ನಡೆದುಕೊಂಡೇ ಬಂದಿದೆ. ಮೂರು ಬಾರಿ ಸಂಪುಟ ವಿಸ್ತರಣೆ ನಡೆದರೂ ಅತೃಪ್ತಿ ಮಾತ್ರ ಶಮನವಾಗಿಲ್ಲ.2019 ರ ಜೂನ್ 26 ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದಂದಿನಿಂದಲೂ ಪಕ್ಷದಲ್ಲಿ ಅತೃಪ್ತಿಯ ಹೊಗೆಯಾಡುತ್ತಲೇ ಇದೆ.
ಮೂವರಿಗೆ ಡಿಸಿಎಂ ಸ್ಥಾನ ನೀಡಿದ್ದು ಅದರಲ್ಲೂ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದು, ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಲಾಕ್ಡೌನ್ ಸಮಯದಲ್ಲೇ ಅತೃಪ್ತರ ಸಭೆ ನಡೆದಿತ್ತು, ಶಾಸಕರಾಗಿದ್ದ ಉಮೇಶ್ ಕತ್ತಿ ಅಪಾರ್ಟ್ ಮೆಂಟ್ ನಲ್ಲಿ ಸಭೆ ನಡೆದಿತ್ತು. ಮುರುಗೇಶ್ ನಿರಾಣಿ, ರಾಮದಾಸ್, ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದು ಸವದಿ ಸೇರಿ 10ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು. ಇದು ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿತ್ತು.
ತದನಂತರ ಶಾಸಕರ ಭವನದಲ್ಲಿ ಮತ್ತೊಮ್ಮೆ ಸಭೆ ನಡೆಸಲಾಯಿತು. ಸತತವಾಗಿ ಎರಡು ದಿನ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ರಾಜೂಗೌಡ, ನಿರಾಣಿ, ರಾಜಕುಮಾರ್ ಪಾಟೀಲ್ ತೆಲ್ಕೂರ, ಹಾಲಪ್ಪ ಆಚಾರ್, ಶಿವನಗೌಡ ಪಾಟೀಲ್, ಗಂಗಾವತಿ ಪರಣ್ಣ ಮುನವಳ್ಳಿ, ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮೂಡ, ಆನಂದ ಮಾಮನಿ ಸೇರಿದಂತೆ ಹಲವು ಶಾಸಕರು ಸಭೆ ನಡೆಸಿ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮೂಲ ಬಿಜೆಪಿಗರ ಕಡೆಗಣಿಸಿ ವಲಸಿಗರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂದು ಕಿಡಿಕಾರಿದ್ದರು.