ಕೊಪ್ಪಳ: ಕೊರೊನಾ ಮಹಾಮಾರಿ ಶಾಲಾ ಮಕ್ಕಳಿಗೆ ಶಾಲೆಯ ಮುಖ ನೋಡದಂತೆ ಮಾಡಿತ್ತು. ಇದೀಗ ವೈರಸ್ನ ಅಬ್ಬರ ಕಡಿಮೆಯಾಗಿದ್ದು ಮಕ್ಕಳು ಸಂತಸದಿಂದ ಶಾಲೆಗೆ ಮರಳಿದ್ದಾರೆ. ಆದರೂ ಕೊರೊನಾ ಗುಮ್ಮ ಇನ್ನೂ ಇರುವುದರಿಂದ ಎಲ್ಲ ಶಾಲೆಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಳೆದ 10 ತಿಂಗಳಿಂದ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಹೊಸ ವರ್ಷಕ್ಕೆ ಆರಂಭವಾದ ಹಿನ್ನೆಲೆಯಲ್ಲಿ ಒಂದಡೆ ಶಾಲೆಗಳಿಗೆ ತಳಿರು ತೋರಣಗಳಿಂದ ಶೃಂಗಾರಗೊಳಿಸುವ ಮೂಲಕ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಸೇರಿ ಕೋವಿಡ್ ನಿಯಮ ಪಾಲನೆ ಹೀಗೆ ಮಕ್ಕಳನ್ನು ಶಾಲೆಗೆ ಶುಕ್ರವಾರ ಭರ್ಜರಿ ಸ್ವಾಗತಿಸಲಾಯಿತು.
ನಗರದ ಹೊರ ವಲಯದಲ್ಲಿರುವ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್ ಜಾಗೂ ಸಾನಿಟೈಜರ್ ಮತ್ತು ಸಿಹಿ ವಿತರಿಸುವ ಮೂಲಕ ಶಾಲೆಗಳನ್ನು ಆರಂಭಿಸಲಾಯಿತು. ಅದರಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮನಸ್ಸಿಗೆ ಮುದ ನೀಡಲು ಶಾಲೆಯನ್ನು ಮಾವಿನ ತೋಪು ಹಾಗೂ ಹೂಮಾಲೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅಲ್ಲದೇ, ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಂತರ ಚಾಕಲೇಟ್ ನೀಡಿ ತರಗತಿಗೆ ಆಹ್ವಾನ ನೀಡಿದ ದೃಶ್ಯಗಳು ಕಂಡ ಬಂದವು.
ಅದಲ್ಲದೆ ಶಾಲೆಗೆ ಬರುವ ಮಕ್ಕಳಿಗೆ ಮಾಸ್ಕ್ ಮತ್ತು ಸಾನಿಟೈಜರ್ ಹಾಗೂ ಮಕ್ಕಳ ತಲೆಯ ಮೇಲೆ ಹೂ ಮಳೆ ಸುರಿಸುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಮಕ್ಕಳು ಸಹ ಸರತಿಯಲ್ಲಿ ನಿಂತು, ಕೋವಿಡ್ ತಪಾಸಣೆಗೆ ಒಳಗಾಗಿ ಸಹಕಾರ ನೀಡಿದರು. ಮನೆಯಲ್ಲಿ ಕುಳಿತು ಬಹಳ ಬೇಸರವಾಗಿತ್ತು. ಶಾಲೆ ಶುರುವಾಗಿದ್ದೇ ತಡ, ಶಾಲೆಗೆ ಓಡೋಡಿ ಬಂದೇವು. ಶಾಲೆಯ ಶಿಕ್ಷಕರು, ಸ್ನೇಹಿತರನ್ನು ಕಳೆದ ಹತ್ತು ತಿಂಗಳಿನಿಂದ ನೋಡಿರಲಿಲ್ಲ. ಈಗ ಬಹಳ ಖುಷಿಯಾಗಿದೆ ಎಂದು ಶಾಲಾ ಮಕ್ಕಳು ಸಂತಸ ಹಂಚಿಕೊಂಡರು.
ಶಿಕ್ಷಕರು ಸಹ ವಿದ್ಯಾರ್ಥಿಗಳನ್ನು ನೋಡಿ ಖುಷಿಪಟ್ಟರು. ಪಾಠ ಮಾಡದೇ ಬಹಳ ದಿನಗಳಾಗಿದ್ದವು. ಈಗ ಪಾಠದ ಜೊತೆಗೆ ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸುತ್ತೇವೆ. ಪಾಲಕರು ಆತಂಕಪಡದೇ ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಶಿಕ್ಷಕರು ಮನವಿ ಮಾಡಿದರು.